ಕುಮಾರಸ್ವಾಮಿ ಅವರ 20 ತಿಂಗಳ ಜನಪ್ರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಲು ಈ ಬಾರಿಯೂ ಮುಂದಾಗಿದ್ದು, ಮುಂದಿನ ತಿಂಗಳು ಕೊಡಗಿನ ಯಾವುದಾದರೂ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಕಾರ್ಯಕ್ರಮ ನಿಗದಿ ಆಗದಿದ್ದರೂ ಇಂತಹದ್ದೊಂದು ಚರ್ಚೆಯಾಗಿದೆ.
ಮಳೆ ಹಾನಿಗೆ ರಾಜ್ಯ ಸರ್ಕಾರ ಸಾಕಷ್ಟು ಪರಿಹಾರವನ್ನೂ ಒದಗಿಸಿದೆ. ಫಲಾನುಭವಿಗಳಿಗೆ ಪರಿಹಾರದ ಹಣ ತಲುಪಿದೆಯೇ ಎಂಬುದನ್ನು ಖುದ್ದು ಪರಿಶೀಲಿಸಲು ಮುಖ್ಯಮಂತ್ರಿ ಆಲೋಚಿಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತರಿಗೆ ನೀಡಲಿರುವ ಮನೆಗಳಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆಯೇ ಅಥವಾ ಯಾವುದಾದರೂ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆಯೇ ಎಂಬುದು ಅಧಿಕೃತಗೊಳ್ಳಬೇಕು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಅಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.