ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಕಾದಿರುವ ಒಳರಸ್ತೆಗಳು...

ನಗರದ ವಾರ್ಡ್‌ ನಂ.3, ಹಲವು ಸಮಸ್ಯೆಗಳ ಆಗರ
Last Updated 16 ಏಪ್ರಿಲ್ 2018, 5:53 IST
ಅಕ್ಷರ ಗಾತ್ರ

ಬೆಳಗಾವಿ: ಸುಶಿಕ್ಷಿತರು, ಬಹುತೇಕ ಉದ್ಯೋಗಸ್ಥರು, ದೊಡ್ಡ ಉದ್ಯಮಿಗಳು, ಕೈಗಾರಿಕೆಗಳನ್ನು ಹೊಂದಿರುವ 3ನೇ ವಾರ್ಡ್‌ ಖಾನಾಪುರ ರಸ್ತೆಯ ಪಶ್ಚಿಮ ಭಾಗದಲ್ಲಿದೆ. ರಾಣಿ ಚನ್ನಮ್ಮ ನಗರದ ಒಳ ರಸ್ತೆಗಳು, ಕೃಷ್ಣಾ ಕಾಲೊನಿ, ವಸಂತ ವಿಹಾರ ಕಾಲೊನಿ ಮೊದಲಾದ ಬಡಾವಣೆಗಳಲ್ಲಿ 20 ವರ್ಷಗಳಿಂದಲೂ ರಸ್ತೆಗಳು ಅಭಿವೃದ್ಧಿಗಾಗಿ ಕಾದಿವೆ.

1983ರಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲು ಅಭಿವೃದ್ಧಿಪಡಿಸಿದ ಬಡಾವಣೆಯೇ ರಾಣಿ ಚನ್ನಮ್ಮ ನಗರ. ಆಗ ನಗರಕ್ಕೆ ವರ್ತುಲರಸ್ತೆಯ ಅಗತ್ಯತೆ ಮನಗಂಡು ಉತ್ಸವ ಹೋಟೆಲ್‌ದಿಂದ ಜೈನ ಬಸದಿವರೆಗೆ ಒಂದೂವರೆ ಕಿಲೊಮೀಟರ್‌ ಉದ್ದದ ರಸ್ತೆಯನ್ನು 100 ಅಡಿ ರಸ್ತೆಯನ್ನಾಗಿ ವಿಸ್ತರಿಸಿ ಅಭಿವೃದ್ಧಿಪಡಿಸುವ ಉದ್ದೇಶ ಇತ್ತು. ಆದರೆ, ಈವರೆಗೂ ಇದು ಅನುಷ್ಠಾನಕ್ಕೆ ಬಂದಿಲ್ಲ.

100 ಅಡಿ ರಸ್ತೆ ನಿರ್ಮಾಣಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಅವರೊಂದಿಗೆ ಮಾತುಕತೆ ನಡೆಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಾಗಿಲ್ಲ ಎನ್ನುವುದು ಇಲ್ಲಿನವರ ದೂರಾಗಿದೆ.

ಪ್ರಯತ್ನಗಳಾಗಿಲ್ಲ:

‘ರಸ್ತೆ ವಿಸ್ತರಣೆಯಾದರೆ ಕಾರ್ಮಿಕರು ಉತ್ಸವ ಹೋಟೆಲ್‌ನಿಂದ ಉದ್ಯಮಬಾಗ್‌ ಕಡೆಗೆ ನೇರವಾಗಿ ಹೋಗಬಹುದು. ಅಂತಹ ಸೌಲಭ್ಯ ಒದಗಿಸುವ ಪ್ರಯತ್ನಗಳಾಗಿಲ್ಲ’ ಎಂದು ಇಲ್ಲಿನ ನಿವಾಸಿ ಶಿರೀಷ ಜೋಶಿ ಪ್ರತಿಕ್ರಿಯಿಸಿದರು. ‘ಅಂಚೆ ಬಡಾವಣೆ ಒಳರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಲ್ಲಿನ ಉದ್ಯಾನ ನಿರುಪಯುಕ್ತವಾಗಿದೆ. ಮಳೆಗಾಲದ ಮೊದಲು ಇದಕ್ಕೆ ಪರಿಹಾರ ಒದಗಿಸಬೇಕು’ ಎಂದು ನಿವಾಸಿ ವಿನಾಯಕ ದೇಶಪಾಂಡೆ ಹೇಳಿದರು.

ಪ್ರಗತಿಯಲ್ಲಿ ಕೆಲ ಕಾಮಗಾರಿ:

ಹಿಂದೂನಗರ 20 ವರ್ಷಗಳಿಂದ ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿತ್ತು. ತೆರೆದ ಚರಂಡಿ ಮೂಲಕವೇ ಕೊಳಚೆ ನೀರು ಹರಿಯುತ್ತಿತ್ತು. ಇದರಿಂದ ಇಲ್ಲಿನ ವಾತಾವರಣ ಹಾಳಾಗುತ್ತಿತ್ತು. ಈಗ ಇಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ರಾಣಿ ಚನ್ನಮ್ಮನಗರ ಹಾಗೂ ಕೈಗಾರಿಕಾ ಪ್ರದೇಶಕ್ಕೆ ನೀರು ಒದಗಿಸಲು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಚನ್ನಮ್ಮನಗರ 2ನೇ ಹಂತದಲ್ಲಿನ ಸಮುದಾಯ ಭವನವನ್ನು ₹ 75 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸುವ ಕಾರ್ಯ ನಡೆದಿದೆ. ಚನ್ನಮ್ಮ ನಗರ–ಗುರುಪ್ರಸಾದ ಕಾಲೊನಿ ರಸ್ತೆಯ ಅಭಿವೃದ್ಧಿಗೆ ಈಗ ಕಾಲ ಕೂಡಿ ಬಂದಿದೆ. ವಿಸ್ತರಣೆ ಮಾಡಿ, ಡಾಂಬರು ಹಾಕುವ ಕಾಮಗಾರಿಗೆ ₹ 50 ಲಕ್ಷ ದೊರೆತಿದೆ.

ಹಿರಿಯ ನಾಗರಿಕರ ವಿಶ್ರಾಂತಿಗಾಗಿ ಹಾಗೂ ಮಕ್ಕಳ ಆಟಕ್ಕೆ ಅನುಕೂಲಕ್ಕಾಗಿ ಗುರುಪ್ರಸಾದ ಕಾಲೊನಿ, ಕಾವೇರಿ ನಗರ, ಚನ್ನಮ್ಮನಗರ, ಡಿಫೆನ್ಸ್‌ ನಗರಗಳ ಉದ್ಯಾನಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯುತ್‌ ದೀಪ, ಆಸನಗಳು ಮತ್ತು ಮಕ್ಕಳ ಆಟಿಕೆಗಳ ಅಳವಡಿಕೆ ಕಾರ್ಯ ನಡೆದಿದೆ. ಗುರುಪ್ರಸಾದ ಕಾಲೊನಿ ರಸ್ತೆಗಳ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ನಗರಪಾಲಿಕೆ ಸದಸ್ಯ ದೀಪಕ ಜಮಖಂಡಿ. ಕಾವೇರಿ ನಗರ, ಭವಾನಿ ಕಾಲೊನಿ ಮತ್ತು ಇತರ ಕೆಲ ಭಾಗಗಳು ಎತ್ತರದಲ್ಲಿ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಈಗ ಗುರುಪ್ರಸಾದ ಕಾಲೊನಿಯಲ್ಲಿನ ಹಳೆಯ ಓವರ್‌ಹೆಡ್‌ ಟ್ಯಾಂಕ್‌ ಮೂಲಕ 10 ಎಚ್‌ಪಿ ಮೋಟರ್‌ ಅಳವಡಿಸಿ ನೀರು ಪೂರೈಸಲಾಗುತ್ತಿದೆ.

ವಾರ್ಡ್‌ನಲ್ಲಿ ತ್ಯಾಜ್ಯದ್ದೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವವರನ್ನು ಪತ್ತೆ ಹಚ್ಚಲು ಪಾಲಿಕೆ ಸದಸ್ಯರು, ಕೆಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ವಾರ್ಡ್‌ –3ರ ವ್ಯಾಪ್ತಿ

ರಾಣಿ ಚನ್ನಮ್ಮನಗರ 2ನೇ ಹಂತ, ಗುರುಪ್ರಸಾದ ಕಾಲೊನಿ, ಹಿಂದೂನಗರ, ಪಾರ್ವತಿನಗರ, ಅರ್ಜುನ ಕಾಲೊನಿ, ಸ್ವಾಮಿನಾಥ ಕಾಲೊನಿ, ಡಿಫೆನ್ಸ್‌ ಕಾಲೊನಿ, ವಿಶ್ವಕರ್ಮ ಕಾಲೊನಿ, ಶ್ರೀನಿವಾಸ ಕಾಲೊನಿ, ಭವಾನಿ ನಗರದ ಕೆಲವು ಪ್ರದೇಶಗಳು, ನರಗುಂದಕರ ಕಾಲೊನಿ.

**

ಅಂಚೆ ಬಡಾವಣೆಯಲ್ಲಿ ಉದ್ಯಾನ ನಿರ್ಮಿಸಲು ₹ 18 ಲಕ್ಷ ಮಂಜೂರಾಗಿದೆ. ವಿಧಾನಸಭೆ ಚುನಾವಣೆ ನಂತರ ಈ ಕಾರ್ಯ ಆರಂಭವಾಗಲಿದೆ. ಉದ್ಯಮಬಾಗಕ್ಕೆ ಸಂಪರ್ಕ ಒದಗಿಸುವ 100 ಅಡಿ ರಸ್ತೆಯ ವಿವಾದ ಬಗೆಹರಿಸಲು ಬುಡಾ ಮತ್ತು ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ - 
ದೀಪಕ ಜಮಖಂಡಿ, ನಗರಪಾಲಿಕೆ ಸದಸ್ಯ

**

ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT