ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಖ ಮಾಡಿಕೊಂಡು ಬಂದ ಯೋಗೀಶ್ವರ್: ಎಚ್.ಡಿ.ಕುಮಾರಸ್ವಾಮಿ

Last Updated 27 ಅಕ್ಟೋಬರ್ 2018, 16:58 IST
ಅಕ್ಷರ ಗಾತ್ರ

ಮೈಸೂರು: ‘ದೋಖ ಮಾಡಿಕೊಂಡೇ ಬಂದಿರುವ ಬಿಜೆಪಿ ಮುಖಂಡ ಸಿ.ಪಿ.ಯೋಗೀಶ್ವರ್ ಅವರಿಗೆ ನನ್ನ ಬಗ್ಗೆ ಆರೋಪ ಮಾಡುವ ನೈತಿಕ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಶನಿವಾರ ತಿರುಗೇಟು ನೀಡಿದರು.

ಅಧಿಕಾರಿಗಳ ವರ್ಗಾವಣೆ ಹಣದಲ್ಲಿ ಕುಮಾರಸ್ವಾಮಿ ಚುನಾವಣೆ ಎದುರಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

‘ವಿಧಾನಸೌಧದ ನನ್ನ ಕಚೇರಿಯಲ್ಲಿ ಮೆರಿಟ್ ಆಧಾರದ ಮೇಲೆ ಕೆಲಸ ಕೊಟ್ಟಿದ್ದೇನೆ. ಯಾರಿಂದಲೂ ಹಣ ಪಡೆದು ಕೆಲಸ ಕೊಟ್ಟಿಲ್ಲ. ಈ ಬಗ್ಗೆ ಬಹಿರಂಗ ಸವಾಲು ಮಾಡುತ್ತೇನೆ. ನಾನು ಹಣ ಪಡೆದಿರುವುದನ್ನು ಯಾರು ಬೇಕಾದರೂ ಸಾಬೀತು ಮಾಡಲಿ’ ಎಂದರು.

‘ಯೋಗೇಶ್ವರ್ ಅರಣ್ಯ ಸಚಿವರಾಗಿದ್ದಾಗ ವರ್ಗಾವಣೆ ಮಾಡಿಯೇ ಖಾತೆ ನಿಭಾಯಿಸಿದ್ದಿರಬಹುದು. ನಿವೇಶನ ಕೊಡುವುದಾಗಿ ಜನರಿಂದ‌ ಹಣ ಸಂಗ್ರಹಿಸಿ ಅದರಿಂದ ಜೀವನ ಮಾಡುತ್ತಿದ್ದಾರೆ. ಅವರಿಂದ ನಾನು ನೀತಿ ಪಾಠ ಕಲಿಯಬೇಕಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಯಂಕ, ನಾಣಿ, ಸೀನ ಎಂದು ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಜೆಡಿಎಸ್‌ನಲ್ಲಿ ಮಾತ್ರ ಅಪ್ಪ– ಮಕ್ಕಳು, ಅಣ್ಣ– ತಮ್ಮ ಇದ್ದಾರೆಯೆ? ಬಿಜೆಪಿಯಲ್ಲಿ ಇಲ್ಲವೆ? ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಗನನ್ನು ಬಿಟ್ಟು ಇನ್ಯಾರು ಅಭ್ಯರ್ಥಿ ಇರಲಿಲ್ಲವೆ?. ಎಷ್ಟು ಪಕ್ಷಗಳಲ್ಲಿ ಅಪ್ಪ– ಮಕ್ಕಳು, ಅಣ್ಣ– ತಮ್ಮ ಇಲ್ಲ. ಈ ಯಂಕ, ನಾಣಿ, ಸೀನ ಎಲ್ಲ ಯಡಿಯೂರಪ್ಪ ಅವರಿಗೇ ಅನ್ವಯಿಸುತ್ತದೆ’ ಎಂದು ಕುಟುಕಿದರು.

ಉಗ್ರಪ್ಪ ಪರ ಪ್ರಚಾರ: ‘ಉಪಚುನಾವಣೆಯಲ್ಲಿ ಉಗ್ರಪ್ಪ ಅವರ ಪರ ಪ್ರಚಾರ ಮಾಡುತ್ತೇನೆ. ಕೊನೆಯ ದಿನ ಮೈಸೂರಿನ ಕಾರ್ಯಕ್ರಮ ಮುಗಿಸಿ ಬಳ್ಳಾರಿಗೆ ಹೋಗುತ್ತೇನೆ. ದೇವೇಗೌಡರೂ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದರು.

ಮಹಿಳಾ ಪೊಲೀಸರಿಗೆ ನೂತನ ಸಮವಸ್ತ್ರ ನೀಡುವ ವಿಚಾರ ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಪ್ಯಾಂಟ್– ಶರ್ಟ್ ಧರಿಸಲು ಕಷ್ಟವಾಗುವುದೆಂದು ಕೆಲವು ಮಹಿಳಾ ಪೊಲೀಸರು ತಿಳಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT