ಹುಬ್ಬಳ್ಳಿ: ‘ಚನ್ನಮ್ಮ ಅವರೊಬ್ಬರನ್ನು ರಾಜ್ಯಸಭಾ ಸದಸ್ಯೆ ಮಾಡಿದರೇ ದೇವೇಗೌಡರ ಇಡೀ ಕುಟುಂಬವೇ ರಾಜಕಾರಣದಲ್ಲಿ ತೊಡಗಿದಂತಾಗುತ್ತದೆ’ ಎಂಬ ಬಿಜೆಪಿ ಶಾಸಕ ಜಗದೀಶ ಶೆಟ್ಟರ್ ಅವರ ಮಾತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೆರಳಿಸಿದೆ.
‘ಇಳಿ ವಯಸ್ಸಿನಲ್ಲಿರುವ ನನ್ನ ತಾಯಿಯ ಹೆಸರನ್ನು ಶೆಟ್ಟರ್ ರಾಜಕಾರಣಕ್ಕೆ ಎಳೆದು ತಂದಿರುವುದಕ್ಕೆ ತೀವ್ರ ನೋವಾಗಿದೆ’ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
‘ಚನ್ನಮ್ಮ ಅವರನ್ನು ದೇವೇಗೌಡರು ರಾಜ್ಯಸಭಾ ಸದಸ್ಯೆ ಮಾಡುವುದೇ ಆಗಿದ್ದರೇ 1989–90ರಲ್ಲಿ ಅವಕಾಶವಿತ್ತು. ಆದರೆ, ನನ್ನ ತಾಯಿ ಮನೆಗೆ ಬರುವ ನಾಡಿನ ಬಡವರು, ಪಕ್ಷದ ಕಾರ್ಯಕರ್ತರಿಗೆ ಗೌರವ, ಆತಿಥ್ಯ ನೀಡುವುದಕ್ಕಷ್ಟೇ ಸೀಮಿತವಾಗಿದ್ದರೇ ಹೊರತು ರಾಜಕೀಯಕ್ಕೆ ಸಿಲುಕಿಲ್ಲ’ ಎಂದರು.
ಖುಷಿ ವಿಷಯ: ‘ಚನ್ನಮ್ಮ ರಾಜ್ಯಸಭಾ ಸದಸ್ಯೆ ಆದರೆ ಅದು ಖುಷಿ ಪಡುವ ವಿಷಯ, ನೋವಿನ ವಿಷಯವಲ್ಲ’ ಎಂದು ಜಗದೀಶ ಶೆಟ್ಟರ್ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
‘ದೇವೇಗೌಡರ ಕುಟುಂಬ ರಾಜಕಾರಣವನ್ನು ಟೀಕೆ ಮಾಡಿದ್ದೇನೆಯೇ ಹೊರತು ಅವರ ತಾಯಿಯನ್ನು ಗೇಲಿ ಮಾಡಿಲ್ಲ’ ಎಂದು ಸಮಜಾಯಿಷಿ ನೀಡಿದರು.
‘ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ ಎಂದು ಕುಮಾರಸ್ವಾಮಿ ಪದೇ ಪದೇ ಹೇಳುತ್ತಾರೆ. ಹಾಗಾದರೇ, ಬಸವರಾಜ ಹೊರಟ್ಟಿ ಅವರನ್ನು ಏಕೆ ಸಚಿವರನ್ನಾಗಿ ಮಾಡಿಲ್ಲ? ವಿಧಾನ ಪರಿಷತ್ಗೆ ಏಳು ಬಾರಿ ಆಯ್ಕೆಯಾಗಿರುವ ಹೊರಟ್ಟಿ, ದೇವೇಗೌಡರ ಸಂಬಂಧಿಕರಾಗಿದ್ದರೇ ಸಚಿವರಾಗಿರುತ್ತಿದ್ದರು’ ಎಂದರು.