ಬೆಂಗಳೂರು: 2019–20ರ ಆಯವ್ಯಯ ಪತ್ರವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸುತ್ತಿದ್ದಾರೆ. ಕುಮಾರಸ್ವಾಮಿ ಬಜೆಟ್ ಮಂಡನೆಗೂ ಮುನ್ನ ವಿರೋಧ ಪಕ್ಷದ ಶಾಸಕರು ಗದ್ದಲ ಪ್ರಾರಂಭಿಸಿದ್ದು, ಗದ್ದಲದ ನಡುವೆಯೇ ಮುಂಗಡಪತ್ರ ಮಂಡನೆಗೆ ಮುಂದಾದರು.
’ನುಡನಾಡೆ ಇರಲೆ, ಗಡಿನಾಡೆ ಇರಲಿ ಕನ್ನಡ ಕಳೆಯ ಕೆಚ್ಚೇವು..’ ಎಂದು ಡಿಎಸ್ ಕರ್ಕಿ ಅವರ ಸಾಲುಗಳನ್ನು ಪ್ರಸ್ತಾಪಿಸಿ, ಯಾವುದೇ ಭೇದ ಮಾಡದಂತೆ ನಾಡಿನ ಎಲ್ಲ ಪ್ರದೇಶದ ಅಭಿವೃದ್ಧಿಗೆ ಗಮನ ಹರಿಸಿರುವುದಾಗಿ ಹೇಳಿದರು. ಇದಕ್ಕೂ ಮುನ್ನ ಡಿವಿ ಗುಂಡಪ್ಪ ನವರ ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಓದಿದರು.
ರೈತರ ನೋವು ನಲಿವಿಗೆ ಹೆಗಲು ಕೊಡಲು ಸರ್ಕಾರ ಸಿದ್ಧ ಎಂದರು.ವಾಣಿಜ್ಯ ಬ್ಯಾಂಕ್ಗಳ ಅಸಹಾರಕ್ಕೆ ನಾವು ಜಗ್ಗಲಿಲ್ಲ. ಈವರೆಗೆ ಸಾಲಮನ್ನಾ ಯೋಜನೆಯಡಿ 12 ಲಕ್ಷ ಸಾಲಖಾತೆಗಳಿಗೆ ₹5000 ಕೋಟಿ ಬಿಡುಗಡೆ ಮಾಡಲಾಗಿದೆ.
ಬೆಳೆಸಾಲ ಮನ್ನಾವನ್ನು ಯಶಸ್ವಿಯಾಗಿ, ಪಾರದರ್ಶಕವಾಗಿ ಜಾರಿ ಮಾಡುತ್ತಿದ್ದೇವೆ. ಅನ್ನದಾತರಿಗೆ ನಾವು ನೀಡುವ ಗೌರವ ಹೊನ್ನಶೂಲದಂತೆ ಅಗಿದೆ. ನಮ್ಮ ಸರ್ಕಾರದ ನಡೆ ರೈತಪರ. ರೈತರ ನೋವಿಗೆ ಮಿಡಿದು ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯು ಸಂಕಲ್ಪ ಮಾಡಿದ್ದೇವೆ.ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವನ್ನು ಸಜ್ಜುಗೊಳಿಸಿದ್ದೇನೆ ಎಂದು ಪ್ರಸ್ತಾಪಿಸಿದರು.
ಗದ್ದಲಕ್ಕೆ ಕಿವಿಗೊಡದೆ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮುಂದುವರಿಸುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪ, ಸಭಾ ತ್ಯಾಗ ಮಾಡುವುದಾಗಿ ಘೋಷಿಸಿ ವಿಧಾನಸಭೆಯಿಂದ ಬಿಜೆಪಿ ಶಾಸಕರು ಹೊರನಡೆದರು.
ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ ರಕ್ಷಣಾ ಪಡೆ ಸಿಬ್ಬಂದಿ ಮತ್ತು ಜನರ ಸಹಾಯವನ್ನು ನೆನೆಯುತ್ತೇನೆ. ₹2000 ಕೋಟಿಗೆ ಮನವಿ ಸಲ್ಲಿಸಿದ್ದರೂ ಕೇವಲ ₹900 ಕೋಟಿ ಸಿಕ್ಕಿತು ಎಂದರು.
ಮಧ್ಯಾಹ್ನ 12:30ಕ್ಕೆ ವಿಧಾನ ಸಭೆಗೆ ಪ್ರವೇಶಿಸುವುದಕ್ಕೂ ಮುನ್ನ ಬೆಳಿಗ್ಗೆ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರು ಶಾಸಕರನ್ನು ಸೆಳೆಯಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದರು. ಬಳಿಕ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸಹ ಮಾಧ್ಯಮ ಗೋಷ್ಠಿ ನಡೆಸಿದ್ದರು. ಬಜೆಟ್ ಮುನ್ನ ಅತೃಪ್ತ ಶಾಸಕರು ಹಾಗೂ ಶಾಸಕರಿಗೆ ಆಮಿಷದ ವಿಚಾರಗಳು ಹೆಚ್ಚು ಸುದ್ದಿಯಾದವು.
ಇವನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.