ಶ್ರೀರಂಗಪಟ್ಟಣ: ಅಂಗವಿಕಲ ಹೆಣ್ಣು ಮಗುವಿನ ಚಿಕಿತ್ಸೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ತಾಲ್ಲೂಕಿನ ಕೆಆರ್ಎಸ್ನಿಂದ ಸೋಮವಾರ ಬೆಳಿಗ್ಗೆ ಬೆಂಗಳೂರು ಕಡೆ ತೆರಳುತ್ತಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊಸ ಆನಂದೂರು ಗ್ರಾಮದ ಕುಮಾರ್ ಮತ್ತು ಲಕ್ಷ್ಮಿ ದಂಪತಿ ಹೊಸ ಹೊಸಹಳ್ಳಿ ಗೇಟ್ ಬಳಿ ಭೇಟಿ ಮಾಡಿ ತಮ್ಮ ಮಗಳ ಸ್ಥಿತಿಯನ್ನು ವಿವರಿಸಿದರು.
ಸಾವಧಾನವಾಗಿ ಸಮಸ್ಯೆ ಆಲಿಸಿದ ಸಿ.ಎಂ ‘ಇವತ್ತು ಸಂಜೆಯೇ ಬೆಂಗಳೂರಿನ ವಿಜಯನಗರದ ನನ್ನ ಮನೆಗೆ ಬನ್ನಿ. ಪ್ರಿಯಾಂಜಲಿ ಚಿಕಿತ್ಸೆಗೆ ತಗಲುವ ಸಂಪೂರ್ಣ ಖರ್ಚು ಭರಿಸುತ್ತೇನೆ. ತಜ್ಞ ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸುತ್ತೇನೆ. ಎದೆಗುಂದಬೇಡಿ, ನಾನಿದ್ದೇನೆ’ ಎಂದು ಭರವಸೆ ನೀಡಿದರು.
ಸಿ.ಎಂ ಅವರು ನೀಡಿದ ಭರವಸೆಯಿಂದ ಸಂತಸಗೊಂಡ ಪ್ರಿಯಾಂಜಲಿ ಪೋಷಕರು ಹಾಗೂ ಬಂಧುಗಳು ಕುಮಾರಸ್ವಾಮಿ ಅವರ ಪರ ಘೋಷಣೆಗಳನ್ನು ಕೂಗಿದರು. ಪ್ರಿಯಾಂಜಲಿ ಪೋಷಕರು ಮಗಳ ಜತೆ ಸಿ.ಎಂ. ಹಿಂದೆಯೇ ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು.
‘ಪ್ರಿಯಾಂಜಲಿ ಹುಟ್ಟುತ್ತಲೇ ನರ ದೌರ್ಬಲ್ಯದಿಂದ ಬಳಲುತ್ತಿದ್ದಾಳೆ. ಮಗಳಿಗೆ ಚಿಕಿತ್ಸೆ ಕೊಡಿಸಲು ಆಗದೆ ಕುಮಾರ್ ಮತ್ತು ಲಕ್ಷ್ಮಿ ದಂಪತಿ ಪರದಾಡುತ್ತಿದ್ದಾರೆ. ಕೂಲಿಯನ್ನೇ ನೆಚ್ಚಿ ಬದುಕುವ ಕುಮಾರ್ ಅವರ ಕುಟುಂಬ ಮಗಳ ಚಿಕಿತ್ಸೆಗಾಗಿ ಈಗಾಗಲೇ ₹ 2 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದೆ. ಹಾಗಾಗಿ ಸಾಲದ ಹೊರೆಯೂ ಇದೆ’ ಎಂದು ಕುಮಾರ್ ಅವರ ಬಂಧುಗಳು ಹೇಳಿದರು.