ಕ್ಷೇತ್ರದಲ್ಲಿನ ಈಚಿನ ರಾಜಕೀಯ ಬೆಳವಣಿಗೆಗಳ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಲಿಂಗಪ್ಪ, ಮಗನ ನಡೆ ಹೇಡಿತನದ ಪರಮಾವಧಿ ಎಂದು ಬೇಸರ ವ್ಯಕ್ತಪಡಿಸಿದರು. ‘ರಾಮನಗರ ಉಪ ಚುನಾವಣೆಯಲ್ಲಿ ನನ್ನ ಮಗ ದುರಂತ ನಾಯಕನ ಪಾತ್ರ ವಹಿಸಿದ್ದಾನೆ. ಇದರಿಂದಾಗಿ ನಮ್ಮ ಕುಟುಂಬದವರು ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ನಾನು ಕಟ್ಟಿದ್ದ ಸ್ವಾಭಿಮಾನಿ ರಾಜಕೀಯದ ಕೋಟೆ ಇಂದು ಉರುಳಿಬಿದ್ದಿದೆ. ಸಾವಿರಾರು ಮತದಾರರಿಗೆ, ಬಿಜೆಪಿ ಕಾರ್ಯಕರ್ತರಿಗೂ ಇದರಿಂದ ನೋವಾಗಿದೆ, ನಾನು ಅವರೆಲ್ಲರ ಕ್ಷಮೆ ಕೋರುತ್ತೇನೆ’ ಎಂದು ಮೇಲಕ್ಕೆ ಎದ್ದು ನಿಂತು ಕೈ ಮುಗಿದರು.