ಬೆಂಗಳೂರು:ಕಬ್ಬು ಬೆಳೆಗಾರರಿಗೆ ₹450 ಕೋಟಿ ಬಾಕಿ ಕೊಡಲು ಸಕ್ಕರೆ ಕಾರ್ಖಾನೆಗಳಿಗೆ 3 ತಿಂಗಳು ಗಡುವು ನೀಡಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.
ರಾಜ್ಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ರೈತರಿಗೆ ಅಭಯ ನೀಡಿ, ಈ ಬಾರಿ ಎಫ್ಆರ್ಪಿ ದರದಲ್ಲಿ ₹2750 ನಂತೆ ಖರೀದಿಸಲು ಸೂಚಿಸಿದರು.
ಸರ್ಕಾರ ಶಕ್ತಿಯುತವಾಗಿದೆ. ಮಾಲಿಕರು ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಉದ್ಧಟತನ ತೋರಬಾರದು. ನಿಯಂತ್ರಿಸುವ ಕೀ ಸರ್ಕಾರವೇ ಇಟ್ಟುಕೊಂಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಸಭೆಯ ಪ್ರಮುಖ ಅಂಶಗಳು
* ಕಬ್ಬು ನಿಯಂತ್ರಣಕ್ಕೆ ಪ್ರತ್ಯೇಕ ವಿದೇಯಕ
* ಎಫ್ಆರ್ಪಿ ದರದ ಅನ್ವಯ ಕಬ್ಬು ಖರೀದಿಗೆ ನಾಳೆಯಿಂದಲೇ ಕೆಲಸ ಮಾಡಲು ಸೂಚನೆ
* ತೂಕ ಮತ್ತು ಅಳತೆಗೆ ಹೊಸಾ ಯಂತ್ರೋಪಕರಣಗಳ ಖರೀದಿ
* ಮಹಾರಾಷ್ಟ್ರ ಮತ್ತು ಗುಜರಾತ್ ಮಾದರಿಯಲ್ಲಿ ಕಬ್ಬು ಖರೀದಿ ಅಧ್ಯಯನಕ್ಕೆ ತಜ್ಜನ ತಂಡ ರಚನೆ
* ಕಬ್ಬಿನ ಕಂಪನಿಗಳ ಆದಾಯದಲ್ಲಿ ಲಾಭಾಂಶವದಲ್ಲಿ ರೈತರಿಗೆ ಶೇರ್ ನೀಡಬೇಕು
* 22 ರೊಳಗೆ ಕಾರ್ಖಾನೆ ಮಾಲಿಕರೊಂದಿಗೆ ಸಿಎಂ ಸಭೆ
* ಶಾಶ್ವತ ಪರಿಹಾರಕ್ಕೆ ಬೆಳಗಾವಿ ಅಧಿವೇಶನದಲ್ಲಿ ಕಾನೂನು
* ಈ ಬಾರಿ ಎಫ್ಆರ್ಪಿ ದರದಲ್ಲಿ ₹2750 ನಂತೆ ಖರೀದಿಸಲು ಸೂಚನೆ
* ರೈತರ ಪ್ರಕಾರ 450 ಕೋಟಿ ಬಾಕಿ ಇದೆ. ನಿಖರ ಮಾಹಿತಿ ತರಿಸಲು ಅಧಿಕಾರಿಗಖಿಗೆ ಸೂಚನೆ
* ಕಾರ್ಖಾನೆಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ.
ರೈತ ಮಹಿಳೆ ಬಗ್ಗೆ....
ರೈತ ಮಹಿಳೆಗೆ ಕುರಿತು ತಾವು ಪದ ಬಳಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ‘ನಾನು ಆಕೆಗೆ ತಾಯಿ ಎಂದು ಸಂಬೋದಿಸಿದ್ದೀನಿ. ಆಡು ಭಾಷೆಯಲ್ಲಿ ನಾನು ಆ ಶಬ್ದ ಬಳಸಿದ್ದೆ’ ಎಂದು ಹೇಳಿದರು.
ಎಪ್ಆರ್ಪಿ ಬೆಲೆ ನೀಡದ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ
ಎಫ್ಆರ್ಪಿ ಬೆಲೆ ಕೊಡಿಸುವುದಷ್ಟೆ ನಮ್ಮಕರ್ತವ್ಯ. ಒಂದು ವೇಳೆ ಎಫ್ಆರ್ಪಿ ಬೆಲೆ ನೀಡದ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ರೈತರಿಗೆ ತಿಳಿಸಿದರು.
ಇದೇ ವೇಳೆ ಎಫ್ಆರ್ಪಿ ದರವನ್ನೂ ಕಾರ್ಖಾನೆಗಳು ನೀಡುತ್ತಿಲ್ಲ, ಅದನ್ನು ಕೊಡಿಸಿ ಎಂದು ರೈತರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.
ಇನ್ನೊಂದೆಡೆ ಅಷ್ಟು ಹಣ ಕೊಡಲಾಗಲ್ಲ ಎಂದು ಸಕ್ಕರೆ ಕಾರ್ಖಾನೆ ಮುಖ್ಯಸ್ಥ ಶ್ರೀಮಂತ್ ಪಾಟೀಲ್ ಸ್ಪಷ್ಟಪಡಿಸಿದಾಗ ಸಭೆಯಲ್ಲಿ ಗದ್ದಲ ಉಂಟಾಯಿತು.
ಬೆಲೆ ಕೊಡಲಾಗಲ್ಲ ಎಂದರೆ ಹೇಗೆ? ಮೂರು ಕಾರ್ಖಾನೆ ಹೇಗೆ ನಡೆಸುತ್ತೀರಿ ಎಂದು ರೈತರು ಮುಗಿಬಿದ್ದರು.
ಇಳುವರಿ ನಿಗದಿ ಬಗ್ಗೆಯೂ ಸಭೆಯಲ್ಲಿ ಬಹುಕಾಲ ಚರ್ಚೆ ನಡೆಯಿತು. ಕಟಾವಿಗೆ ಮುನ್ನ ಇಳುವರಿ ಅಂಶ ಹದಿನೈದರಷ್ಟಿದ್ದರೆ, ಕಾರ್ಖಾನೆಗೆ ತಂದಾಗ 8-9 ನಿಗದಿ ಪಡಿಸಲಾಗುತ್ತದೆ. ಹೀಗಾದರೆ ರೈತರಿಗೆ ನಷ್ಟವಾಗುತ್ತದೆ. ಈ ಗೊಂದಲ ಪರಿಹಾರಕ್ಕೆ ಪ್ರತ್ಯೇಕ ಸಮಿತಿ ರಚಿಸಬೇಕು ಎಂದು ರೈತರು ಒತ್ತಾಯಿಸಿದರು. ಈ ಬಗ್ಗೆ ಶೀಘ್ರ ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಸಭೆಗೆ ತಿಳಿಸಿದರು.
ಹಗ್ಗಜಗ್ಗಾಟ
ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ.
'ನೀವು ಯಾಕೆ ಪ್ರತಿಭಟನೆ ಮಾಡಿದಿರಿ. ನಿಮ್ಮ ಏನೇ ಸಮಸ್ಯೆ ಇದ್ದರೂ ಬಗೆಹರಿಸುವುದಾಗಿ ಹೇಳಿದ್ದೆ. ಆದರೂ ನೀವು ವಿನಾಕಾರಣ ಪ್ರತಿಭಟನೆ ನಡೆಸಿದ್ದು ಸರಿಯೇ’ ಎಂದುಸಭೆಯಲ್ಲಿ ರೈತ ಮುಖಂಡರನ್ನು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
'ನನ್ನ ಪ್ರತಿಕೃತಿಗೆ ಕೊಡಲಿಯಲ್ಲಿ ಹೊಡೆಯುವಂತಹ ತಪ್ಪು ಏನು ಮಾಡಿದ್ದೇನೆ. ನನ್ನಿಂದ ನಿಮಗೆ ಏನು ಅನ್ಯಾಯವಾಗಿದೆ. ಹಾಗೇನಾದ್ರೂ ಆಗಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬಹುದಾಗಿತ್ತಲ್ಲವೇ' ಎಂದೂ ಕೇಳಿದರು.
'ವಿಧಾನಸೌಧ ನಿಮಗೆ ಎಂದಿಗೂ ಮುಕ್ತವಾಗಿರುತ್ತದೆ' ಎಂದುರೈತ ಮುಖಂಡರಿಗೆಕುಮಾರಸ್ವಾಮಿ ಹೇಳಿದರು.
ಕಬ್ಬು ಬಾಕಿ ಪಾವತಿ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ದರ ನಿಗದಿಪಡಿಸುವಂತೆ ರೈತ ಮುಖಂಡರು ಬೇಡಿಕೆ ಮುಂದಿಟ್ಟಿದ್ದಾರೆ.
ದರ ನಿಗದ ಚರ್ಚೆ
ಸಕ್ಕರೆ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಸಕ್ಕರೆ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್ ಜೊತೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರತ್ಯೇಕಚರ್ಚೆ ನಡೆಸಿದರು.
ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಚರ್ಚೆಗೂ ಮೊದಲು ಈ ಮಾತುಕತೆ ನಡೆಯಿತು.
ರೈತಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ.ಗಂಗಾಧರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಲೋಕೊಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದಾರೆ.
ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಮತ್ತು ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಬಾಕಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳಗಾವಿ, ಬಾಗಲಕೋಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಕಾವು ಸೋಮವಾರ ರಾಜ್ಯ ರಾಜಧಾನಿಗೂ ಕಾಲಿಟ್ಟಿತ್ತು.
ಈ ನಡುವೆ ಮುಖ್ಯಮಂತ್ರಿ ಪ್ರತಿಭಟನಾ ನಿರತ ರೈತ ಮಹಿಳೆ ಕುರಿತಾಗಿ ‘ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ನೀನು’ ಎಂದು ಹಾಗೂ ‘ಪ್ರತಿಭಟನೆ ನಡೆಸುತ್ತಿರುವವರು ರೈತರಾ, ಗೂಂಡಾಗಳಾ’ ಎಂದು ಹೇಳಿದ್ದ ಮಾತಿಗೆ ರಾಜ್ಯದೆಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಿಎಂ ಕ್ಷಮೆಯಾಚಿಸಬೇಕು ಎಂದೂ ರೈತ ಮುಖಂಡರು ಆಗ್ರಹವನ್ನೂ ಮಾಡಿದ್ದಾರೆ.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.