ಹಾಸನ: ಸಚಿವ ಎಚ್.ಡಿ.ರೇವಣ್ಣ ಪುತ್ರರಾದ ಸೂರಜ್ ಹಾಗೂ ಪ್ರಜ್ವಲ್ ರೇವಣ್ಣ ಅವರು ನಗರದ ಬಿ.ಎಂ.ರಸ್ತೆ ಒತ್ತುವರಿ ಮಾಡಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಶನಿವಾರ ತೆರವು ಮಾಡಿದರು.
ರಸ್ತೆಒತ್ತುವರಿ ಮಾಡಿ ನಿರ್ಮಿಸಿದ್ದ 41 ಕಟ್ಟಡಗಳ ಮಾಲೀಕರಿಗೆ ಮೂರು ತಿಂಗಳ ಹಿಂದೆಯೇ ನಗರಸಭೆ ನೋಟಿಸ್ ನೀಡಿತ್ತು. ರಸ್ತೆಅಳತೆ ಮಾಡಿ ಗುರುತು ಮಾಡಲಾಗಿತ್ತು. ಆದರೆ, ಯಾವುದೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿರಲಿಲ್ಲ.
ಜೆಸಿಬಿ ಯಂತ್ರಗಳ ಜತೆಗೆ ಅಧಿಕಾರಿಗಳು ಶುಕ್ರವಾರ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿದರು. ಮೊದಲ ದಿನ 15 ಕಟ್ಟಡಗಳನ್ನು ತೆರವು ಮಾಡಲಾಯಿತು. ಶನಿವಾರ ಬೆಳಿಗ್ಗೆ ಸೂರಜ್ ಹಾಗೂ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಸಂಪೂರ್ಣ ನೆಲಸಮ ಮಾಡಲಾಯಿತು. ರೇವಣ್ಣ ಪುತ್ರರಿಗೆ ನಗರಸಭೆ ನೋಟಿಸ್ ನೀಡಿತ್ತು. ಒತ್ತುವರಿ ತೆರವು ಕಾರ್ಯಾಚರಣೆಗೆ ಅನೇಕರು ವಿರೋಧ ವ್ಯಕ್ತಪಡಿಸಿದರಾದರೂ ನಗರಸಭೆ ಅಧಿಕಾರಿಗಳು ಹಿಂದೆ ಸರಿಯಲಿಲ್ಲ.
ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಭಾನುವಾರವೂ ಮುಂದುವರೆಯಲಿದೆ ಎಂದು ನಗರಸಭೆ ಆಯುಕ್ತ ಬಿ.ಎ.ಪರಮೇಶ್ ತಿಳಿಸಿದ್ದಾರೆ.