ಬೆಂಗಳೂರು: ‘ಉಮೇಶ ಜಾಧವಗೆ ರಾಜಕೀಯ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್. ಈಗ ಅವರೇ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಅವರ ಮಗಳು ಅನುತ್ತೀರ್ಣ ಆಗಿರುವುದಕ್ಕೂ ಕಾಂಗ್ರೆಸ್ಸಿಗೂ ಏನು ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
‘ತಮ್ಮ ಪುತ್ರಿ ಅನುತ್ತೀರ್ಣಗೊಳ್ಳಲು ಕಾಂಗ್ರೆಸ್ ನಾಯಕರೇ ಕಾರಣ’ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ ಜಾಧವ ದೂರಿದ್ದರು. ‘ಎಲ್ಲ ಗೊಂದಲಗಳಿಗೆ ಜಾಧವ ಅವರೇ ಕಾರಣ. ನಾವು ಅವರನ್ನು ಪಕ್ಷದಿಂದ ಉಚ್ಚಾಟಿಸಿರಲಿಲ್ಲ. ಪಕ್ಷ ಅವರಿಗೆ ಎಲ್ಲ ಗೌರವವನ್ನು ಕೊಟ್ಟಿತ್ತು. ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿ, ಅವರೇ ಪಕ್ಷ ಬಿಟ್ಟು ಹೋಗಿದ್ದಾರೆ’ ಎಂದರು.
ಯಡಿಯೂರಪ್ಪಗೆ ಅಧಿಕಾರ ದಾಹ: ‘ಬೇಹುಗಾರಿಕೆ, ದೂರವಾಣಿ ಕದ್ದಾಲಿಕೆ, ಸರ್ಕಾರಿ ಯಂತ್ರಗಳ ದುರುಪಯೋಗ ಇವೆಲ್ಲವನ್ನು ಮಾಡುವುದು ಬಿಜೆಪಿಯವರು. ಎಲ್ಲ ಮೋಸ, ವಂಚನೆ ಅವರಿಗಷ್ಟೆ ಗೊತ್ತು. ಆದರೆ, ಬಿಎಸ್ವೈ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.