ಬೆಂಗಳೂರು: ‘ಕಾಂಗ್ರೆಸ್–ಜೆಡಿಎಸ್ನ 18ಕ್ಕೂ ಹೆಚ್ಚು ಶಾಸಕರನ್ನು ಮುಂಬೈ ವಿಮಾನ ಹತ್ತಿಸುವುದು ಖಚಿತ, ಸರ್ಕಾರ ಬಿದ್ದೇ ಬೀಳುತ್ತದೆ’ ಎಂಬ ಬಿಜೆಪಿ ನಾಯಕರ ಪ್ರತಿಪಾದನೆಯನ್ನು ಖಂಡಿಸಿದ ಸಮನ್ವಯ ಸಮಿತಿ ಅಧ್ಯಕ್ಷಸಿದ್ದರಾಮಯ್ಯ ಇದರ ಬಗ್ಗೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ನ ಯಾವೊಬ್ಬ ಶಾಸಕನೂ ಮುಂಬೈಗೆ ಹೋಗಿಲ್ಲ. ಸರ್ಕಾರ ಸುಭದ್ರವಾಗಿದೆ. ನರೇಂದ್ರ ಮೋದಿಯವರು ಜನರ ಅಕೌಂಟ್ಗೆ ಹಾಕುತ್ತೇನೆ ಎಂದು ಹೇಳಿದ್ದ ಮೊತ್ತದ ನೂರು ಪಟ್ಟು ಹೆಚ್ಚು ಹಣ ನೀಡುತ್ತೇವೆ ಎಂದು ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡುತ್ತಿದ್ದಾರೆ. ಆದರೆ ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸಿದ್ದಾಂತ ಮಾತನಾಡುವ ಬಿಜೆಪಿಯವರು ಅಧಿಕಾರಕ್ಕಾಗಿ ಹೀನ ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ಸೋತವರು ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸರ್ಕಾರವನ್ನು ಅಸ್ಥಿರಗೊಳಿಸುವ ಅನೀತಿಯುತ ಪ್ರಯತ್ನ ಮಾಡಬಾರದು. ರಾಜ್ಯದ ಜನ ಇದನ್ನು ಗಮನಿಸುತ್ತಾ ಇದ್ದಾರೆ. ಅವರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.