ಬೆಂಗಳೂರು, ಕಲಬುರ್ಗಿ: ಕಾಂಗ್ರೆಸ್ನಚಿಂಚೋಳಿ ಕ್ಷೇತ್ರದಶಾಸಕ ಡಾ.ಉಮೇಶ ಜಾಧವ ಅವರು ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್ ಗ್ರಾಮದಲ್ಲಿನ ನಿವಾಸಕ್ಕೆ ಬೇಟಿ ನೀಡಿವಿಧಾನಸಭಾಧ್ಯಕ್ಷ ರಮೇಶಕುಮಾರ್ ಅವರಿಗೆ ರಾಜೀನಾಮೆಪತ್ರವನ್ನು ಸಲ್ಲಿಸಿದರು.
'ರಾಜೀನಾಮೆಯನ್ನು ಸ್ವೀಕರಿಸಿದ ರಮೇಶಕುಮಾರ್ ಅವರು, ಡೋಂಟ್ ವರಿ ಜಾಧವ, ನಾನು ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ಹೇಳಿದರು' ಎಂದು ಶಾಸಕರ ಆಪ್ತ ಮೂಲಗಳು ತಿಳಿಸಿವೆ.
'ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಜಾಧವ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ' ಎಂಬುದು ಮೂಲಗಳ ಹೇಳಿಕೆ.
ಮಾ.6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರ್ಗಿಗೆ ಬರಲಿದ್ದು, ಆ ದಿನ ಜಾಧವ ಬಿಜೆಪಿ ಸೇರ್ಪಡೆ ಆಗುವುದು ಖಚಿತವಾಗಿದೆ.
ಕಾಂಗ್ರೆಸ್ ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಜಾಧವ ಹಲವು ದಿನ ಮುಂಬಯಿನಲ್ಲಿ ವಾಸ್ತವ್ಯ ಹೂಡಿದ್ದರು.
'ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಹಕರಿಸುತ್ತಿಲ್ಲ, ಕ್ಷೇತ್ರಕ್ಕೆ ಭೇಟಿ ನೀಡುತ್ತಿಲ್ಲ' ಎಂದು ಜಾಧವ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್, 'ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಸ್ವತಃ ಎರಡು ಬಾರಿ ಕರೆ ಮಾಡಿದರೂ ಜಾಧವ ಸಂಪರ್ಕ ಸಾಧ್ಯವಾಗಲಿಲ್ಲ. ಅವರು ಪಕ್ಷ ತೊರೆಯುವುದಾದರೆ ಇನ್ನೊಬ್ಬರ ಮೇಲೆ ಆರೋಪ ಹೊರೆಸಿ ಹೋಗುವುದು ಸರಿಯಲ್ಲ' ಎಂದು ಮಾಧ್ಯಮಗಳಿಗೆ ಹೇಳಿದ್ದರು.