ಹೂವಿನಹಡಗಲಿ: ಜಿಲ್ಲಾ ಪಂಚಾಯಿತಿಕಾಂಗ್ರೆಸ್ ಸದಸ್ಯೆ ಸುಶೀಲಮ್ಮನವರು ಅವರ ಪತಿ, ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರ ಮಂಗಳವಾರ ಚುನಾವಣಾ ಪ್ರಚಾರ ಕೈಗೊಂಡರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರ ಪತ್ನಿ ಸುಶೀಲಮ್ಮ ಕಾಂಗ್ರೆಸ್ನಿಂದ ಜಿಲ್ಲಾ ಪಂಚಾಯ್ತಿಗೆ ಆಯ್ಕೆಯಾದವರು. 2016ರಲ್ಲಿ ಹರಪನಹಳ್ಳಿ ತಾಲ್ಲೂಕು ಅರಸೀಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಚಿಹ್ನೆಯಡಿ ಆಯ್ಕೆಯಾಗಿದ್ದ ಅವರು ಈಗ ಕಮಲದ ಗುರುತಿಗೆ ಮತ ಕೇಳುತ್ತಿದ್ದಾರೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಶೀಲಮ್ಮ, ಪತಿಗಾಗಿ ತಮ್ಮ ಪಕ್ಷ ನಿಷ್ಠೆಯನ್ನು ಬದಲಿಸಿದ್ದಾರೆ. ನೆರೆಯ ಹರಪನಹಳ್ಳಿ ತಾಲ್ಲೂಕು ಅರಸೀಕೇರಿ ದೇವೇಂದ್ರಪ್ಪ ಹೂವಿನಹಡಗಲಿ ತಾಲ್ಲೂಕು ನವಲಿ ಗ್ರಾಮದ ಅಳಿಯ. ಸುಶೀಲಮ್ಮ ತನ್ನ ತವರು ತಾಲ್ಲೂಕಿನಲ್ಲಿ ಪತಿಯ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಮಂಗಳವಾರ ಅವರು ಪಟ್ಟಣದ ಕಾಯಕನಗರ, ನಾಗತಿಬಸಾಪುರ, ಹುಗಲೂರು, ಮಾಗಳ, ಕೊಯಿಲಾರಗಟ್ಟಿ, ಮದಲಗಟ್ಟಿ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದರು.
‘ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ಹೊಂದಿದ್ದರೂ ಸೂಕ್ತ ಸ್ಥಾನಮಾನ ನೀಡಿರಲಿಲ್ಲ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಎಂ.ಪಿ.ರವೀಂದ್ರ ನನಗೆ ಕಾಂಗ್ರೆಸ್ ಟಿಕೆಟ್ ನೀಡಿ ಗೆಲ್ಲಿಸಿದ್ದರು. ಪತಿಯ ವ್ಯಕ್ತಿತ್ವ ಗುರುತಿಸಿ ಇದೀಗ ಬಿಜೆಪಿ ಟಿಕೆಟ್ ನೀಡಿದೆ. ನನ್ನ ಜಿಲ್ಲಾ ಪಂಚಾಯ್ತಿ ಸದಸ್ಯತ್ವಕ್ಕಿಂತ ಪತಿಯ ರಾಜಕೀಯ ಭವಿಷ್ಯ ಮುಖ್ಯ. ಹೀಗಾಗಿ ಪತಿಯ ಪರ ಪ್ರಚಾರದಲ್ಲಿ ತೊಡಗಿರುವೆ’ ಎಂದು ಸುಶೀಲಮ್ಮ ಹೇಳಿದರು.
‘ನಾನು ಬಿಜೆಪಿ ಸೇರಿದರೆ, ನನ್ನ ಪತ್ನಿ ಕೂಡ ಸೇರಿದಂತೆ’ ಎಂದು ಇತ್ತೀಚೆಗೆ ವೈ. ದೇವೇಂದ್ರಪ್ಪನವರು ಹೇಳಿದ್ದರು.