ಬೆಂಗಳೂರು:ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಈ ಸಂಬಂಧ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗಿದೆ.
ವಿದೇಶಗಳಿಂದ ಭಾರತಕ್ಕೆ ಬಂದಿಳಿಯುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಅದರಲ್ಲಿಯೂ, ವೈರಸ್ನಿಂದ ಹೆಚ್ಚು ಜನ ಮೃತಪಟ್ಟಿರುವ ಚೀನಾದ ವುಹಾನ್, ಹ್ಯೂಬಿಯಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲಾಗಿದೆ.
ವಿದೇಶದಿಂದ ಬಂದಿಳಿದ ಪ್ರಯಾಣಿಕರಲ್ಲಿ ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಈ ಮೂರು ಲಕ್ಷಣಗಳಲ್ಲಿ ಯಾವುದಾದರೂ ಒಂದು ಲಕ್ಷಣ ಕಾಣಿಸುತ್ತಿದ್ದರೂ ತಕ್ಷಣ ಮಾಹಿತಿ ನೀಡಬೇಕು ಎಂದು ವಿಮಾನ ನಿಲ್ದಾಣದಲ್ಲಿ ಅಳವಡಿಸಿದ ಫಲಕದಲ್ಲಿ ಸೂಚಿಸಲಾಗಿದೆ.
ಈ ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ, ಚೀನಾದ ವುಹಾನ್ ಮತ್ತು ಹ್ಯೂಬಿಗೆ ಭೇಟಿ ನೀಡಿ ಭಾರತಕ್ಕೆ ಬಂದಿರುವವರು ಎಚ್ಚರಿಕೆಯಿಂದ ಇರಬೇಕು.
ಭಾರತಕ್ಕೆ ಬಂದಿಳಿದ ದಿನದಿಂದ 28 ದಿನಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದರೆ, ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದಲ್ಲಿ ಅಳವಡಿಸಿರುವ ಫಲಕದಲ್ಲಿ ಸೂಚಿಸಲಾಗಿದೆ.