ಬೆಳಗಾವಿ: ಶಾಲಾ ಮಕ್ಕಳ ಸಮವಸ್ತ್ರ ವಿತರಣೆಗೆ ಕೇಂದ್ರ ಬಿಡುಗಡೆ ಮಾಡಿದ್ದ ಮೊದಲ ಕಂತಿನ ₹266 ಕೋಟಿಗೆ ಬಳಕೆ ಪ್ರಮಾಣಪತ್ರ ನೀಡದ್ದರಿಂದ ಎರಡನೇ ಕಂತಿನ ಹಣವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಪ್ರತಿ ವಿದ್ಯಾರ್ಥಿಗೆ ₹ 300 ವಿತರಿಸಬೇಕು ಎಂದಿದ್ದರೂ, 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ₹ 200 ಹಾಗೂ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ₹ 300 ನಿಗದಿ ಮಾಡಲಾಗಿದೆ. ₹ 100 ಕಡಿತಗೊಳಿಸುವ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರದ ಆದೇಶದನ್ವಯ ಟೆಂಡರ್ ಕರೆಯದೇ ಆಯಾ ಶಾಲಾ ಎಸ್ಡಿಎಂಸಿ ಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಬೇಕು ಎಂದು ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರು ತಿಳಿಸಿದ ನಂತರವೂ ಟೆಂಡರ್ ಕರೆದಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.