ಬೆಂಗಳೂರು: ಇದೇ 29 ರಂದು (ಸೋಮವಾರ) ನಡೆಯುವ ವಿಧಾನಮಂಡಲ ಅಧಿವೇಶನದ ಸಂದರ್ಭ ವಿಧಾನಪರಿಷತ್ತಿನಲ್ಲಿ ಸಭಾನಾಯಕರ ನೇಮಕ ಆಗದೇ ಇರುವುದರಿಂದ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಯಾಚನೆ ಮಾಡುವುದರ ಜತೆಗೆ ಧನವಿನಿಯೋಗ ಮಸೂದೆಗೂ ಒಪ್ಪಿಗೆ ಪಡೆಯಬೇಕಾಗಿದೆ. ಈ ಮಸೂದೆಯನ್ನು ವಿಧಾನಪರಿಷತ್ತೂ ಅಂಗೀಕರಿಸಬೇಕು. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಮಾಡದಿರುವುದರಿಂದ ಸಭಾನಾಯಕನ ನೇಮಕವೂ ಆಗಿಲ್ಲ. ಸಭಾನಾಯಕರಿಲ್ಲದೆ ವಿಧಾನಪರಿಷತ್ ಕಲಾಪ ನಡೆಸಲು ಸಾಧ್ಯವೇ ಎಂಬ ಜಿಜ್ಞಾಸೆ ಮೂಡಿದೆ.
ಏಕೆಂದರೆ, ವಿಧಾನಪರಿಷತ್ ನಿಯಮಾವಳಿ ಪ್ರಕಾರ, ಸಭಾನಾಯಕ ಎಂದರೆ, ಮುಖ್ಯಮಂತ್ರಿಯವರು ಪರಿಷತ್ತಿನ ಸದಸ್ಯರಾಗಿದ್ದರೆ ಅವರು ಅಥವಾ ಪರಿಷತ್ತಿನ ಸದಸ್ಯರಾಗಿರುವ ಹಾಗೂ ಸಭಾನಾಯಕರಾಗಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿಯವರಿಂದ ನಾಮ ನಿರ್ದೇಶಿತರಾದ ಮಂತ್ರಿಯವರು ಕಲಾಪದ ವೇಳೆಯಲ್ಲಿ ಹಾಜರಿರಬೇಕು.
ಮುಖ್ಯಮಂತ್ರಿ ಹಾಜರಿದ್ದರೆ ಸಾಕು: ಸೋಮವಾರ ಮಧ್ಯಾಹ್ನ 3.30 ಕ್ಕೆ ವಿಧಾನಪರಿಷತ್ ಕಲಾಪ ಆರಂಭಗೊಳ್ಳಲಿದೆ. ಧನವಿನಿಯೋಗ ಮಸೂದೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿಯವರು ಹಾಜರಿದ್ದರೆ ಸಾಕು ಎಂದು ವಿಧಾನಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಹೊಸ ಸರ್ಕಾರವಾದ್ದರಿಂದ ಒಂದು ದಿನದ ಮಟ್ಟಿಗೆ ಸಮಸ್ಯೆ ಇಲ್ಲ. ಸಚಿವ ಸಂಪುಟ ರಚನೆ ಆದ ಬಳಿಕ ಸಭಾನಾಯಕರನ್ನು ನೇಮಕ ಮಾಡಬಹುದು. ಆದ್ದರಿಂದ, ಈ ಅಧಿವೇಶನದಲ್ಲಿ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.