ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿಯಾಗಿ ಭಾಷಣ ಮಾಡೋದನ್ನು ಕಲಿತುಕೊಳ್ಳಿ: ಕೆ.ಎಸ್.ಈಶ್ವರಪ್ಪಗೆ ಕೋರ್ಟ್ ಎಚ್ಚರಿಕೆ

Last Updated 5 ಏಪ್ರಿಲ್ 2019, 9:40 IST
ಅಕ್ಷರ ಗಾತ್ರ

ಬೆಂಗಳೂರು: ‘ಸರಿಯಾಗಿ ಭಾಷಣ ಮಾಡೋದನ್ನು ಕಲಿತುಕೊಳ್ಳಿ' ಎಂದು ಜನಪ್ರತಿನಿಧಿಗಳ ಕೋರ್ಟ್ ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಮೌಖಿಕವಾಗಿ ಖಡಕ್ ಎಚ್ಚರಿಕೆ ನೀಡಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಆರೋಪಿಯಾದ ಈಶ್ವರಪ್ಪ ಶುಕ್ರವಾರ, ಇಲ್ಲಿನ ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಕೋರ್ಟ್‌ಗೆ’ ಹಾಜರಾದರು.

ವಿಚಾರಣೆ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ‘ಜನರ ಮುಂದೆ ಏನೇನೊ ಮಾತಾಡ್ಬೇಡಿ. ಸ್ವಲ್ಪ ಸರಿಯಾಗಿ ಮಾತಾಡೋದನ್ನು ಕಲಿತುಕೊಳ್ಳಿ’ ಎಂದು ಗಂಭೀರ ಎಚ್ಚರಿಕೆ ನೀಡಿದರು.

ಖುಲಾಸೆ: 2013ರ ಏಪ್ರಿಲ್ 9ರಂದು ವಿಧಾನ ಸಭೆ ಚುನಾವಣೆ ವೇಳೆ ಅಂದಿನ ಉಪ ಮುಖ್ಯಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ವಿಪ್ರ ವೇದಿಕೆ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಚುನಾವಣಾ ಭಾಷಣ ಮಾಡಿದ್ದರು.

‘ಈ ಭಾಷಣ ಎರಡು ಕೋಮುಗಳ ನಡುವೆ ಸಾಮರಸ್ಯ ಹಾಳು ಮಾಡುವಂತಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ’ ಎಂದು ಆರೋಪಿಸಿ ಕೋಟೆ ಠಾಣೆ ಪೊಲೀಸರು ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಭಾರತೀಯ ದಂಡ ಸಂಹಿತೆ ಕಲಂ 153 ಎ, 295ಎ ಮತ್ತು 298 ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

‘ಈ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಧೀಶ ರಾಮಚಂದ್ರ ಡಿ. ಹುದ್ದಾರ ಅವರು ಈಶ್ವರಪ್ಪ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದ್ದಾರೆ.

ಈ ಕುರಿತ ಆದೇಶವನ್ನು ಪ್ರಕಟಿಸಿದ ಅವರು, ‘ಸಾರ್ವಜನಿಕ ವೇದಿಕೆಗಳಲ್ಲಿ ಸರಿಯಾಗಿ ಮಾತನಾಡಿ’ ಎಂದು ಈಶ್ವರಪ್ಪ ಅವರಿಗೆ ಮೌಖಿಕವಾಗಿ ಕಠಿಣ ಎಚ್ಚರಿಕೆ ನೀಡಿದರು.

ಈಶ್ವರಪ್ಪ ಭಾಷಣದ ಯಥಾವತ್ ಇಲ್ಲಿದೆ: ಶಿವಮೊಗ್ಗ ಒಂದರಲ್ಲೇ 68 ಜನ ಬ್ರಾಹ್ಮಣರ ಹೆಣ್ಣು ‘ಆ ಮುಸಲ್ಮಾನ ಯುವಕರು ಹೊತ್ಕೊಂಡು ಹೋಗ್ತಾರೆ. ದಾಖಲೆ ಸಮೇತ ಹೇಳ್ತಾ ಇದ್ದೀನಿ. ಯಾಕೀ ಸಭೆಯಲ್ಲಿ ಪ್ರಸ್ತಾಪ ಮಾಡ್ತೀನಿ ಅಂದರೆ ಬೀದಿಯಲ್ಲಿ ಹೋಗೋ ಹೆಣ್ಣು ಮಕ್ಕಳು ಬೀದಿಯಲ್ಲಿ ಬಿದ್ದಿದ್ದಾರಾ? ಉಳಿದ ಎಲ್ಲ ಸಮಾಜದ ಹೆಣ್ಣು ಮಕ್ಕಳನ್ನು ಹೊತ್ಕೊಂಡು ಹೋಗಿದ್ದಾರೆ, ಅವರು ಮುಗ್ಧ ಹೆಣ್ಣು ಮಕ್ಕಳು. ಅವರನ್ನ ಇದನ್ನು ಮಾಡ್ತೀನಿ ಅದನ್ನ ಮಾಡ್ತೀನಿ, ಕೆಲಸ ಕೊಡಿಸ್ತೀನಿ, ವಿದೇಶ ತೋರಿಸ್ತೀನಿ, ಕಲ್ಪನೆ ಇರೊಲ್ಲ ಪಾಪ. ಮನೆಯಲ್ಲಿ ಊಟ ತಿಂಡಿ ಮಾಡುವಂತ ಹೆಣ್ಣು ಮಕ್ಕಳಿಗೆ ವಿದೇಶ ಅಂತಿದ್ದಂಗೆ ಏನು ಅನ್ನಿಸ್ತದೆ? ಆ ಮುಸಲ್ಮಾನ ಹುಡುಗರು ಆರು ತಿಂಗಳು ವರ್ಷ ಇಟ್ಕೊಂಡು ತಂದು ಮನೆಗೆ ಬಿಸಾಕ್ತಾರೆ. ಯಾರಿಗೆ ಹೇಳಿಕೊಳ್ಳುತ್ತೀರಿ, ಮರ್ಯಾದೆ ಪ್ರಶ್ನೆ ಕಂಪ್ಲೇಂಟ್ ಕೊಡೊಕ್ಕಾಗಲ್ಲ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT