ಮೈಸೂರು: ಪ್ರಾಣಿಗಳಿಗೂ ಕೋವಿಡ್ ಸೋಂಕು ಹರಡುತ್ತಿರುವುದು ಪತ್ತೆಯಾಗುತ್ತಿದ್ದಂತೆ ಮೈಸೂರು ಮೃಗಾಲಯದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.
ಪ್ರಾಣಿಗಳ ಜೊತೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇದಲ್ಲದೇ, ಮೃಗಾಲಯ ಪ್ರವೇಶಿಸುವ ಅಧಿಕಾರಿಗಳು, ಸಿಬ್ಬಂದಿಯನ್ನು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸಲಾಗುತ್ತಿದೆ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಮ್ಯಾಟ್ ಹಾಕಲಾಗಿದೆ. ಮೃಗಾಲಯದ ಸಿಬ್ಬಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡಲಾಗಿದೆ.
ವೈದ್ಯರು ಪ್ರತಿ ಪ್ರಾಣಿ ಮೇಲೂ ನಿಗಾ ಇಟ್ಟಿದ್ದಾರೆ. 100ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾದ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ. ವೈದ್ಯಾಧಿಕಾರಿಗಳಿಂದ ಪ್ರಾಣಿ ಪಾಲಕರಿಗೆ ತರಬೇತಿ ಹಾಗೂ ಓರಿಯೆಂಟೇಷನ್ ನೀಡಲಾಗಿದೆ ಎಂದರು.
ಸದ್ಯ ಮೃಗಾಲಯದಲ್ಲಿ 1,450 ಪ್ರಾಣಿಗಳು ಇವೆ. ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದರಿಂದ ಪ್ರಾಣಿಗಳು ಲವಲವಿಕೆಯಿಂದ ಓಡಾಡಿಕೊಂಡಿವೆ.