ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿದ್ಯಾರ್ಥಿಗಳಿಗಾಗಿ ದೆಹಲಿಯಿಂದ ಹೊರಡಲಿದೆ ‘ಶ್ರಮಿಕ ವಿಶೇಷ’ ರೈಲು

ನೋಂದಣಿ ಮಾಡದವರಿಗಾಗಿ 14ರಂದು ಮತ್ತೊಂದು ರೈಲು
Last Updated 11 ಮೇ 2020, 8:49 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ ಸಂದರ್ಭ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರನ್ನು ‘ಶ್ರಮಿಕ ವಿಶೇಷ’ ರೈಲಿನ ಮೂಲಕ ಕರೆದೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ‘ಸೇವಾ ಸಿಂಧು’ ಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿರುವವರನ್ನು ಈ ರೈಲಿನ ಮೂಲಕ ಉಚಿತವಾಗಿ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕರ್ನಾಟಕ ಭವನದ ಮೂಲಗಳು ತಿಳಿಸಿವೆ.

ಒಟ್ಟು 956 ಜನ ನೋಂದಣಿ ಮಾಡಿಸಿದ್ದು, ಆ ಪೈಕಿ ಅಂದಾಜು 800 ಜನರಿಗೆ ಅವರವರ ಮೂಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳಿಂದ ಕರೆಸಿಕೊಳ್ಳಲು ಒಪ್ಪಿಗೆ ದೊರೆತಿದೆ. ಇನ್ನಿತರರಿಗೆ ಅನ್ಯ ಕಾರಣಗಳಿಂದ ಪ್ರಯಾಣಕ್ಕೆ ಅವಕಾಶ ದೊರೆಯುವುದು ಬಾಕಿ ಇದೆ. ಎಲ್ಲರನ್ನೂ ಮೊದಲು ದೆಹಲಿ ಸರ್ಕಾರದ ವೈದ್ಯಕೀಯ ಸಿಬ್ಬಂದಿ ಮೂಲಕ ಅಗತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಿ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಲ್ಲಿ ಮಾತ್ರ ಕರೆದೊಯ್ಯಲಾಗುತ್ತದೆ.

ಇಲ್ಲಿಂದ ತೆರಳುವ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಬೆಂಗಳೂರಿನಲ್ಲಿ ಮತ್ತೆ ತಪಾಸಣೆಗೆ ಒಳಪಡಿಸಿ ಅವರವರ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ದು, ಸರ್ಕಾರ ಏರ್ಪಾಡು ಮಾಡಿದ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ. 14 ದಿನಗಳ ನಂತರ ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿ ‘ನೆಗೆಟಿವ್‌’ ವರದಿ ಬಂದವರನ್ನು ಮನೆಗೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಸರ್ಕಾರ ಈಗಾಗಲೇ ವಿಶೇಷ ರೈಲಿಗೆ ಅನುಮತಿ ನೀಡಿದ್ದು, ಪ್ರಯಾಣದ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದೆ. ಇನ್ನಷ್ಟು ಮಾಹಿತಿಗಳನ್ನು ಮತ್ತೆ ಹಂಚಿಕೊಳ್ಳಲಾಗುತ್ತದೆ. ರೈಲು ಹೊರಡುವ ಸಮಯದ ಕುರಿತು ವಿವರಿಸಲಾಗುತ್ತದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ನೋಂದಾಯಿತರಿಗೆ ಕರೆ ಮಾಡಿ ಸ್ಪಷ್ಟಪಡಿಸಲಾಗಿದೆ.

ನೋಂದಣಿ ಮಾಡಿಸದವರಿಗೆ 14ರಂದು ರೈಲು

‘ಸೇವಾ ಸಿಂಧು’ ಸಹಾಯವಾಣಿ ಅಡಿ ನೋಂದಣಿ ಮಾಡಿಕೊಳ್ಳದ ಸಾರ್ವಜನಿಕರಿಗೆ ಮತ್ತೊಂದು ಹವಾನಿಯಂತ್ರತ ಬೋಗಿಗಳ (ಎ.ಸಿ) ರೈಲು ಇಲ್ಲಿಂದ ಇದೇ 14ರಂದು ಬೆಂಗಳೂರಿಗೆ ತೆರಳಲಿದೆ.

ಈ ರೈಲಿನ ಮೂಲಕ ತೆರಳಲು ಬಯಸುವವರು ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ಆ್ಯಪ್‌ ಮೂಲಕ ಟಿಕೆಟ್‌ ಕಾದಿರಿಸುವುದು ಕಡ್ಡಾಯ. ಈ ರೈಲಿನ ಮೂಲಕ ಪ್ರಯಾಣ ಮಾಡಲು ಬಯಸುವವರಿಗಾಗಿ ಸೋಮವಾರ ಸಂಜೆ 4ರಿಂದ ಆನ್‌ಲೈನ್‌ ಟಿಕೆಟ್‌ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಏಜೆನ್ಸಿಗಳಿಗೆ ಟಿಕೆಟ್‌ ಹಂಚಿಕೆಗೆ ಅನುಮತಿ ನೀಡಲಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT