ರಾಯಚೂರು:ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಚೆಗೆ ಕರೇಗುಡ್ಡ ಗ್ರಾಮವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಅವರ ಬಸ್ ತಡೆದು ಪ್ರತಿಭಟನೆ ನಡೆಸಿದ 50 ಜನ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
‘ಭದ್ರತಾ ಲೋಪ’ದ ಕಾರಣಯರಗೇರಾ ವೃತ್ತದ ಇನ್ಸ್ಪೆಕ್ಟರ್ದತ್ತಾತ್ರೇಯ ಕಾರ್ನಾಡ ಮತ್ತು ರಾಯಚೂರು ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ನಿಂಗಪ್ಪ ಅವರನ್ನು ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಅಮಾನತುಗೊಳಿಸಿದ್ದಾರೆ.
ಮುಖ್ಯಮಂತ್ರಿ ತೆರಳುತ್ತಿದ್ದ ಸರ್ಕಾರಿ ಬಸ್ ಎದುರು ಪ್ರತಿಭಟನೆ ನಡೆಸಿದ್ದ 50 ಕಾರ್ಮಿಕರ ವಿರುದ್ಧವೂ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಿಯುಸಿಐ ಅಧ್ಯಕ್ಷ ಆರ್.ಮಾನಸಯ್ಯ, ಕಾರ್ಯದರ್ಶಿ ಜಿ.ಅಮರೇಶ ಸೇರಿದಂತೆ ಸದಸ್ಯರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕಾನೂನು ವಿರುದ್ಧ ಗುಂಪು ರಚನೆ, ದಂಗೆ, ಕಾನೂನು ವಿರುದ್ಧ ಚಟುವಟಿಕೆಯಲ್ಲಿ ಎಲ್ಲರೂ ಭಾಗಿದಾರರು ಹಾಗೂ ಒಬ್ಬ ವ್ಯಕ್ತಿಗೆ ತಡೆಹಾಕಿದ ಆರೋಪದಡಿ ವಿವಿಧ ಸೆಕ್ಷೆನ್ ಅಡಿ ಪ್ರಕರಣ ದಾಖಲಿಸಲಾಗಿದೆ.