ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಸರೂರ ಗ್ರಾಮದ ಗಚ್ಚಿನ ಗುಡಿ ರೇವಣಸಿದ್ದೇಶ್ವರ ದೇವರಿಗೆ ಹಾಕಲಾಗಿದ್ದ 850 ಗ್ರಾಂ ತೂಕದ ಬೆಳ್ಳಿ ಕಿರೀಟ ಬುಧವಾರ ರಾತ್ರಿ ಕಳುವಾಗಿದ್ದು, ಆಶ್ಚರ್ಯಕರ ರೀತಿಯಲ್ಲಿ ಗುರುವಾರ ದೊರಕಿದೆ.
ರಾತ್ರಿ ಗಸ್ತಿನಲ್ಲಿದ್ದ ನೇಪಾಳಿ ಗೂರ್ಖಾ ಹರಿಸಿಂಗ್ ದ್ಯಾಮವ್ವನ ಗುಡಿಯ ಬಳಿ ಬಂದಾಗ, ಅಲ್ಲಿಯೂ ಕಿರೀಟ ಕದಿಯಲು ಹೊಂಚು ಹಾಕಿದ್ದ ಕಳ್ಳನ ಕಂಡುಹಿಡಿಯಲು ಹೋಗುತ್ತಿದ್ದಂತೆ ಆತ ಸರೂರ ಗ್ರಾಮದಿಂದ ಕದ್ದು ತಂದಿದ್ದ ಬೆಳ್ಳಿ ಕಿರೀಟ ಬಿಟ್ಟು ಪರಾರಿಯಾಗಿದ್ದಾನೆ.
ತನಗೆ ಸಿಕ್ಕ ಈ ಕಿರೀಟವನ್ನು ಹರಿಸಿಂಗ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಿರೀಟ ಕಳುವಾದ ಬಗ್ಗೆ ಗುರುವಾರ ಬೆಳಿಗ್ಗೆ ಪ್ರಕರಣ ದಾಖಲಿಸಲು ಬಂದ ಗ್ರಾಮಸ್ಥರಿಗೆ ಪೊಲೀಸರು ಕಿರೀಟ ಒಪ್ಪಿಸಿದ್ದಾರೆ. ನಂತರ ಪೊಲೀಸರು ಹರಿಸಿಂಗ್ ಅವರನ್ನು ಸನ್ಮಾನಿಸಿದರು.