ಮಂಗಳೂರು: ಯುವತಿಯರ ಸರಣಿ ಹಂತಕ ಸೈನೆಡ್ ಮೋಹನ್ ಕುಮಾರ್ ವಿರುದ್ಧದ 17 ನೇ ಕೊಲೆ ಪ್ರಕರಣವೂ ಸಾಬೀತಾಗಿದ್ದು, ಇದೇ 18 ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸೈಯಿದುನ್ನೀಸಾ ತೀರ್ಪನ್ನು ಕಾಯ್ದಿರಿಸಿದ್ದಾರೆ.
ಪ್ರಕರಣದ ವಿವರ: ಕಾಸರಗೋಡಿನ ಪೈವಳಿಕೆ ಗ್ರಾಮದ 26 ವರ್ಷದ ಯುವತಿಗೆ ತನ್ನ ಹೆಸರು ಸುಧಾಕರ ಎಂದು ಪರಿಚಯಿಸಿಕೊಂಡಿದ್ದ ಸೈನೆಡ್ ಮೋಹನ್, ತಾನು ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದ. ಯುವತಿಯನ್ನು 2006ರ ಜೂನ್ 20ರಂದು ಮಂಗಳೂರಿಗೆ ಕರೆಸಿಕೊಂಡಿದ್ದ. ವಿವಾಹಕ್ಕೆ ವರನ ನೋಡುವ ಕಾರಣ ಆಕೆಯ ಜತೆಗೆ ಅತ್ತೆ ಕೂಡ ಮಂಗಳೂರಿಗೆ ಬಂದಿದ್ದರು.
ಯುವತಿಯನ್ನು ಮಡಿಕೇರಿಗೆ ಕರೆದುಕೊಂಡ ಹೋದ ಮೋಹನ್ ಕುಮಾರ್, ಆಕೆಯ ಮೇಲೆ ಅತ್ಯಾಚಾರ ನಡೆಸಿ, ಮರುದಿನ ಸೈನೆಡ್ ನೀಡಿ ಕೊಲೆ ಮಾಡಿದ್ದ. ಯುವತಿಯ ಚಿನ್ನಾಭರಣ ದೋಚಿ, ಫೈನಾನ್ಸ್ವೊಂದರಲ್ಲಿ ಅಡವಿರಿಸಿದ್ದ.
2009ರ ಅಕ್ಟೋಬರ್ 21ರಂದು ಬಂಟ್ವಾಳದಲ್ಲಿ ಬಂಧಿತನಾದ ಮೋಹನ್, ಯುವತಿಯ ಕೊಲೆ ಮಾಡಿರುವುದಾಗಿ ತಿಳಿಸಿದ್ದ. ಈ ವೇಳೆ ಪೈವಳಿಕೆಯ ಯುವತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.