ಬೆಂಗಳೂರು: ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ನಲ್ಲಿ ನಾಲ್ಕು ಜನ ಕಾರ್ಯಾಧ್ಯಕ್ಷರ ನೇಮಕ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಶಿವಕುಮಾರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಮಾಡಿದಾಗ ಈ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದರು.
ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಹಾಗೂ ಮಾಧ್ಯಮಗಳು ಏನು ತೋರಿಸುತ್ತಿವೆ ಎಂಬುದು ನನಗೆ ಗೊತ್ತು. ನಾನು ಗುಂಪು ಕಟ್ಟಿಕೊಂಡು ಹೋಗಲ್ಲ, ಯಾರು ಎಷ್ಟು ಬಣಗಳನ್ನು ಸೃಷ್ಟಿಮಾಡಿಕೊಂಡಿದ್ದಾರೊ ಗೊತ್ತಿಲ್ಲ ಈ ವಿಚಾರದ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು.
ಅಮಿತ್ ಶಾ ರಾಜ್ಯ ಭೇಟಿ ವೇಳೆ ಮಹದಾಯಿ ವಿಚಾರ ಪ್ರಸ್ತಾಪಿಸದ ಬಗ್ಗೆ ಅವರು ಮಾತನಾಡಿ ಬಿಜೆಪಿಗೆ ಮಹದಾಯಿ, ಕಾವೇರಿ, ಕೃಷ್ಣಾನೂ ಬೇಕಾಗಿಲ್ಲ, ಅವರಿಗೆ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಮಾತ್ರ ಬೇಕು, ಬೇರೆ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಬೇಡ ಎಂದು ಟೀಕಿಸಿದರು.
ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸ ತಡೆಹಿಡಿಯಲು ಸೂಚನೆ ಹೋಗಿದೆ, ಮೈತ್ರಿ ಸರ್ಕಾರ ವೇಳೆ ನನ್ನ ಕ್ಷೇತ್ರಕ್ಕೆ ಸೇರಿದಂತೆ ಬೇರೆ ಕ್ಷೇತ್ರಕ್ಕೆ ಮಂಜೂರಾದ ಅಭಿವೃದ್ಧಿ ಕೆಲಸ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ಹೋಗಿದೆ ಎಂದರು.