ಮೈಸೂರು: ದಸರಾ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಸ್ತೆ ಓಟದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪಾಲ್ಗೊಂಡು ಗಮನ ಸೆಳೆದರು.
ಓವಲ್ ಮೈದಾನದಲ್ಲಿ ಓಟಕ್ಕೆ ಚಾಲನೆ ನೀಡಿದ ಅವರು ಹಿರಿಯರ ವಿಭಾಗದಲ್ಲಿ ಪಾಲ್ಗೊಂಡ ಸ್ಪರ್ಧಿಗಳ ಜತೆ ತಾವೂ ಓಡಿದರು. ಪಂಚೆ ಎತ್ತಿಕಟ್ಟಿ ಸುಮಾರು 50 ಮೀ. ವೇಗವಾಗಿ ಓಡಿದ ಸಚಿವರು ಎಡವಿ ಬಿದ್ದರು. ಆದರೆ ಸುಧಾರಿಸಿಕೊಂಡು ಮತ್ತೆ ಸ್ವಲ್ಪ ದೂರ ನಿಧಾನವಾಗಿ ಓಡಿದರು.
ರಸ್ತೆ ಓಟದಲ್ಲಿ ಸ್ಪರ್ಧಿಗಳು ಮತ್ತು ಉತ್ಸಾಹಿಗಳು ಸೇರಿದಂತೆ ಸಾವಿರಕ್ಕೂಅಧಿಕ ಮಂದಿ ಭಾಗವಹಿಸಿದರು. 10, 6, 5, 3 ಮತ್ತು 2 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.