ಮಡಿಕೇರಿ:ಕೊಡಗುಜಿಲ್ಲೆಯಲ್ಲಿ ಭಾರೀ ಮಳೆ, ಭೂಕುಸಿತದಿಂದ ಅಪಾರ ಹಾನಿ ಸಂಭವಿಸಿದ್ದು ಈ ಬಾರಿ ‘ಮಡಿಕೇರಿ ದಸರಾ’ವನ್ನು ಸರಳವಾಗಿ ಆಚರಿಸಲು ಶನಿವಾರ ನಿರ್ಧರಿಸಲಾಗಿದೆ.
ದಸರಾ ದಶಮಂಟಪ ಸಮಿತಿ ವತಿಯಿಂದ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿಅಧ್ಯಕ್ಷ ರವಿಕುಮಾರ್ ಮಾತನಾಡಿ, ಮಳೆಯಿಂದ ನೂರಾರು ಜನರು ನಿರಾಶ್ರಿತರಾಗಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ದಸರಾವನ್ನು ವೈಭವಯುತವಾಗಿ ಆಚರಿಸುವುದು ಸರಿಯಲ್ಲ. ಸರಳವಾಗಿ ಆಚರಿಸಲಾಗುವುದು’ ಎಂದು ಹೇಳಿದರು.
‘ಮಡಿಕೇರಿ ದಸರಾಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ಆಚರಣೆ ಮಾಡದೇ ಕೈಬಿಡಲು ಸಾಧ್ಯವಿಲ್ಲ. ಎಲ್ಲ ಕಾರ್ಯಕ್ರಮಗಳನ್ನೂ ಸಾಂಕೇತಿಕವಾಗಿ ನಡೆಸಲಾಗುವುದು. ಪ್ರತಿವರ್ಷ ದಶಮಂಟಪಕ್ಕೆ ಡಿ.ಜೆ ಹಾಗೂ ಆಕರ್ಷಕ ಲೈಟಿಂಗ್ ವ್ಯವಸ್ಥೆ ಇರುತಿತ್ತು. ಈ ಬಾರಿ ಇರುವುದಿಲ್ಲ. ಸಾರ್ವಜನಿಕರಿಂದಲೂ ಹಣ ಸಂಗ್ರಹಿಸುವುದಿಲ್ಲ’ ಎಂದು ತಿಳಿಸಿದರು.
ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ‘ನಾಲ್ಕು ಶಕ್ತಿ ದೇವತೆಗಳಿಂದ ಮಡಿಕೇರಿ ಉಳಿದಿದೆ. ಹೊರ ವಲಯದಲ್ಲಿ ನಡೆದ ಭೀಕರ ದುರಂತ ಇನ್ನೂ ಕಣ್ಮುಂದೆಯೇ ಇದ್ದು, ಸರ್ಕಾರದ ನೀಡಿದ ಅನುದಾನಕ್ಕೆ ಸೀಮಿತವಾಗಿ ದಸರಾವನ್ನು ಆಚರಿಸಲಾಗುವುದು’ ಎಂದರು.