ಮಡಿಕೇರಿ: ದಸರಾ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ದಶಮಂಟಪಗಳ ಶೋಭಾಯಾತ್ರೆಗೆ ವಿವಿಧೆಡೆಯಿಂದ ಬಂದಿದ್ದ ಪ್ರವಾಸಿಗರು ಸಾಕ್ಷಿಯಾದರು. ವಿದ್ಯುತ್ ಬೆಳಕಿನಲ್ಲಿ ಮಂಟಪಗಳು ಕಂಗೊಳಿಸಿದವು. ಪೌರಾಣಿಕ ಕಥಾ ಸಾರಾಂಶವುಳ್ಳ ಪ್ರದರ್ಶನಕ್ಕೆ ಪ್ರೇಕ್ಷಕರು ಮನಸೋತರು.
ಶ್ರೀಪೇಟೆ ರಾಮ ಮಂದಿರ, ದೇಚೂರು ರಾಮ ಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ, ಕೋಟೆ ಮಾರಿಯಮ್ಮ, ಕೋದಂಡ ರಾಮಮಂದಿರ, ಕರವಲೆಭಗವತಿ, ಕೋಟೆ ಗಣಪತಿ, ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ದೇವಾಲಯದ ಮಂಟಪಗಳ ಕಲಾಕೃತಿಗಳು ವಿದ್ಯುತ್ ಬೆಳಕಿನ ನಡುವೆ ಆಕರ್ಷಿಸಿದವು.
‘ಗಣಪತಿ ಮತ್ತು ಪರಶುರಾಮ ಕಾಳಗ’, ‘ಶಿವ ಪುರಾಣ...’, ‘ನಂದಿಯಿಂದ ಶಿವನ ದರ್ಶನ...’, ‘ಪಂಚಮುಖಿ ಆಂಜನೇಯ ದರ್ಶನ...’ ಸೇರಿದಂತೆ ಹಲವು ಪೌರಾಣಿಕ ಕಥೆಗಳನ್ನು ಪ್ರಸ್ತುತಪಡಿಸಲಾಯಿತು.
ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಮಡಿಕೇರಿಯಲ್ಲಿ ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಲಾಯಿತು. ಶೋಭಾಯಾತ್ರೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಮೈಸೂರಿನಲ್ಲಿ ಜಂಬೂ ಸವಾರಿ ಮುಕ್ತಾಯವಾದ ಕೂಡಲೇ ಮಡಿಕೇರಿಯಲ್ಲಿ ಶೋಭಾಯಾತ್ರೆ ರಂಗು ಪಡೆದುಕೊಳ್ಳುತ್ತಿತ್ತು. ಆದರೆ, ಈ ಬಾರಿ ವೈಭವ ಕಳೆದುಕೊಂಡಿತ್ತು.
‘ನಾಡಹಬ್ಬ ಕೈಬಿಡಬಾರದೆಂದು ಸಾಂಪ್ರದಾಯಿಕವಾಗಿ ನಡೆಸಲಾಯಿತು’ ಎಂದು ಶ್ರೀಪೇಟೆ ರಾಮಮಂದಿರದ ಪದಾಧಿಕಾರಿಗಳು ತಿಳಿಸಿದರು.