ಬೆಂಗಳೂರು:ಜಾತಿ ವ್ಯವಸ್ಥೆ ಜಾಸ್ತಿ ಆಗಿದೆ. ಅದನ್ನು ಹೋಗಲಾಡಿಸಬೇಕು. ಅದಕ್ಕೆ, ಜನರಲ್ ಹಾಸ್ಟಲ್ ಅಂತ ಮಾಡಿ, ಜಾತಿ ಪದ್ಧತಿಯನ್ನು ಹೋಗಲಾಡಿಸಿ, ನಾವು ಓದುವಾಗ ಜಾತಿ ಆಧಾರದ ಮೇಲೆ ಹಾಸ್ಟಲ್ ಇರಲಿಲ್ಲ. ಈಗ ಜಾತಿ ವ್ಯವಸ್ಥೆ ಜಾಸ್ತಿ ಆಗಿದೆ. ನಾವೇ ಜಾತಿಯಿಂದ ವಿದ್ಯಾರ್ಥಿಗಳನ್ನ ಬೇರೆ ಮಾಡಿದ್ರೆ ಜಾತಿ ವ್ಯವಸ್ಥೆಯನ್ನು ನಾವೇ ಬಲಮಾಡಿದಂತೆ ಅಲ್ಲವಾ? ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ ಅಧಿಕಾರಿಗಳನ್ನು ಪ್ರಶ್ನಿಸಿದರು.
ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಅವರಿಗೆ ಪರಮೇಶ್ವರ ಅವರು ಕ್ಲಾಸ್ ತೆಗೆದುಕೊಂಡರು. ಗಂಗಕಲ್ಯಾಣ, ದೌರ್ಜನ್ಯ ಕೇಸ್ ಅಂಕಿ ಅಂಶ, ಎಸ್ಸಿ–ಎಸ್ಟಿ ಹಾಸ್ಟೆಲ್, ದಲಿತ ಬಡತನ ನಿರ್ಮೂಲನೆ, ಮಕ್ಕಳ ಉನ್ನತ ಶಿಕ್ಷಣ, ಹಾಸ್ಟೆಲ್ ನಿವೇಶನ, ಮೂಲಸೌಕರ್ಯ,..ಹೀಗೆ ಇಲಾಖೆಗೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಆಗಿರುವ ಕಾರ್ಯದ ಬಗ್ಗೆ ಮಾಹಿತಿ ನೀಡದಿರುವುದಕ್ಕೆ ಪರಮೇಶ್ವರ ಗರಂ ಆದರು. ಹಾಸ್ಟೆಲ್ ಕಟ್ಟೋಕೆ ಜಾಗ ದೊರೆತಿಲ್ಲ ಎಂಬ ಉತ್ತರಕ್ಕೆ ಸಿಡಿಮಿಡಿಗೊಂಡು,6 ತಿಂಗಳೊಳಗೆ ಈ ವ್ಯವಸ್ಥೆ ಸರಿಯಾಗಬೇಕು. ಎಲ್ಲ ಜಿಲ್ಲೆಯಲ್ಲೂ ಹಾಸ್ಟೆಲ್ ಕಟ್ಟೋಕೆ ಪ್ರಸ್ತಾವನೆ ಇಲಾಖೆಗೆ ಕಳುಹಿಸಬೇಕು ಎಂದರು.
ಎಲ್ಲ ಜಿಲ್ಲೆಯಲ್ಲಿ ಒಂದು ಜನರಲ್ ಹಾಸ್ಟಲ್ ಮಾಡಿ, ಅದರಲ್ಲಿ ಎಲ್ಲರಿಗೂ ಅವಕಾಶ ಇರಬೇಕು. ಯಶಸ್ವಿಯಾದರೆ ಎಲ್ಲೆಡೆ ಅದೇ ಮಾಡೋಣ, ಜಾತಿ ಉಲ್ಲೇಖ ಕಡಿಮೆ ಆಗತ್ತೆ. ಮಕ್ಕಳಲ್ಲಿ ಜಾತಿ ಮನಸ್ಥಿತಿ ತೆಗೆಸಬೇಕು.ಸಾರ್ವಜನಿಕ ವಿದ್ಯಾರ್ಥಿನಿಲಯ ಅಂತ ಕರೀರಿ. ಜಾತಿ ಆಧಾರದಲ್ಲಿ ಶೇಕಡವಾರು ಬೇರೆ ಬೇರೆ ಮಾಡೋದು ಬೇಡ. ಜಾತಿ ವ್ಯವಸ್ಥೆ ಹೋಗಬೇಕು. ಎಲ್ಲರೂ ಒಂದೇ ಅನ್ನೋ ಭಾವನೆ ಮಕ್ಕಳಲ್ಲಿ ಬರುವಂತೆ ನಾವು ಮಾಡಬೇಕು ಎಂದರು.
ಈ ಪ್ರಸ್ತಾವನೆ ಕಳುಹಿಸಿಕೊಡಿ. ಪ್ರಾಯೋಗಿಕವಾಗಿ 30 ಜಿಲ್ಲೆಯಲ್ಲಿ ಹಾಸ್ಟೆಲ್ ಕಟ್ಟೋಣ. ಇದು ಯಶಸ್ವಿ ಆದರೆ ಎಲ್ಲೆಡೆ ಇದೇ ಮಾದರಿ ಅನುಸರಿಸೋಣ. ಡಿಸಿ ಮೇಲೆ ನೋಡಲ್ ಅಧಿಕಾರಿಗಳನ್ನು ಹಾಕಿದ್ದೀವಿ. ಅವರು ಏನು ಪರಿಶೀಲನೆ ಮಾಡುತ್ತಿದ್ದಾರೆ?ಸರಕಾರದ ಯೋಜನೆಗಳನ್ನು ಜಿಲ್ಲಾಧಿಕಾರಿ ಅನುಷ್ಠಾನ ಮಾಡಿದ್ದಾರೆಯೇ? ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಇಲ್ಲವೇ– ಇದರ ವರದಿಯನ್ನು ನೋಡಲ್ ಅಧಿಕಾರಿಗಳು ನೀಡಬೇಕು ಎಂದು ಎಚ್ಚರಿಸಿದರು.
ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ
ಚುನಾವಣಾ ರಾಜಕೀಯ ಸಾಕಾಗಿದೆ. ಇಷ್ಟು ವರ್ಷ ಹೋರಾಟ ಮಾಡಿದ್ದು ಸಾಕು. ಈಗ ನನಗೆ ವಯಸ್ಸಾಗಿದೆ. ಇನ್ನು ಮುಂದೆ ಹೋರಾಟ ಸಾಧ್ಯವಿಲ್ಲ, ಹಾಗಾಗಿರಾಜಕೀಯ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯದಾದ್ಯಂತ 11.5 ಲಕ್ಷ ಮನೆಗಳ ನಿರ್ಮಾಣದ ಗುರಿ ಇದ್ದು, 7.08 ಲಕ್ಷ ಮನೆಗಳ ನಿರ್ಮಾಣ ಹಂತದಲ್ಲಿವೆ ಹಾಗೂ 2.8 ಲಕ್ಷ ಮನೆ ನಿರ್ಮಾಣ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿವೆ. ವಿಧವೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ 1 ಸಾವಿರ ಮನೆ ಮೀಸಲಿದೆ ಎಂದು ಸಚಿವೆ ಜಯಮಾಲ ಮಾಹಿತಿ ನೀಡಿದರು.
ಸರ್ಕಾರಿ ಭೂಮಿ ಎಷ್ಟಿದೆ ಮಾಹಿತಿ ತರಿಸಿಕೊಳ್ಳಿ. ಕೆಲವರಿಗೆ ನಿವೇಶನ ಕೊಡಬೇಕು. ಅದಕ್ಕೆ ಕೆಲವು ಕಡೆ ಖರೀದಿ ಮಾಡಬೇಕು. ನಿವೇಶನ ಹಂಚಿಕೆ ಮಾಡಲೇಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಮಾಜಿ ಸೈನಿಕರಿಗೆ ನಿವೇಶನದ ಬದಲು ಬಿಡಿಎ ಪ್ಲಾಟ್, ಹೌಸಿಂಗ್ ಬೋರ್ಡ್ನಲ್ಲಿ ಮನೆ ಕಟ್ಟುವುದು ಉತ್ತಮ. ನಿವೇಶನಕ್ಕೆ ಜಾಗದ ಸಮಸ್ಯೆ ಇದೆ. ಇದರ ಬದಲಿಗೆ ಈ ವ್ಯವಸ್ಥೆಗೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆಯಾದರೆ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ನಿವೇಶನ ಸರ್ವೆ ವಿಚಾರ
ಪಿಡಿಒಗಳ ಮೇಲೆ ಆಕ್ರೋಶ ಹೊರಹಾಕಿದ ಸಚಿವ ರೇವಣ್ಣ, ನಿವೇಶನ ಹಂಚಿಕೆಯಲ್ಲಿ ನಿಧಾನ ಮಾಡುವ ಪಿಡಿಒಗಳ ಇನ್ಕ್ರಿಮೆಂಟ್ ಕಟ್ ಮಾಡಿಸಿ, ಬುದ್ಧಿ ಬರುತ್ತೆ ಎಂದರು. ಅನಿಲ ಭಾಗ್ಯದಡಿ 10 ಲಕ್ಷ ಜನರನ್ನು ಜಿಲ್ಲಾ ಮಟ್ಟದ ಕಮಿಟಿ ಗುರುತಿಸಿದೆ. ಆಗಸ್ಟ್ 15ರಿಂದ ವಿತರಣೆ ಕಾರ್ಯ ಪ್ರಾರಂಭವಾಗುತ್ತೆ ಎಂದರು.
ರಾಜ್ಯದಲ್ಲಿ 20 ಸಾವಿರ ನ್ಯಾಯಬೆಲೆ ಅಂಗಡಿ ಇದೆ. 374ಹೊಸ ಅಂಗಡಿಗೆ ನೋಟಿಫಿಕೇಷನ್ ಆಗುತ್ತಿವೆ. ನ್ಯಾಯಬೆಲೆ ಅಂಗಡಿಗಳನ್ನು ಗ್ರಾಮ ಪಂಚಾಯಿತಿಗೆ ನೀಡುವ ಬದಲು ಸೊಸೈಟಿ ಅಥವಾ ಬೇರೆಯವರಿಗೆ ನೀಡಿ ಎಂದು ಹೇಳಿದರು.
’ಬಿಪಿಎಲ್ ಕಾರ್ಡ್ಗಾಗಿ 30 ಲಕ್ಷ ಅರ್ಜಿ ಬಂದಿದೆ.ಆನ್ಯುವಲ್ ರಿವೈಸ್ ಡೇಟಾ ಬೇಸ್ ಮಾಡುವ ಕೆಲಸ ಆಗುತ್ತಿದೆ. ಕೆಲವರು ತೆಗೆದುಕೊಳ್ಳುವುದಿಲ್ಲ, ಕೆಲವರದ್ದು ನಕಲಿಯಾಗಿರುತ್ತದೆ. ಇದನ್ನು ಪರಿಷ್ಕರಿಸಬೇಕಾಗಿದೆ ಎಂದು ಆಹಾರ ಇಲಾಖೆ ಆಯುಕ್ತ ಹೇಳಿದರು.
ಮಾತೃ ಯೋಜನೆ ಅನುಷ್ಠಾನ ಹೇಗೆ?
ಮಾತೃ ಯೋಜನೆ ಅನುಷ್ಠಾನ ಮಾಡೋದೆ ದೊಡ್ಡ ಸಮಸ್ಯೆ ಆಗಿದೆ. ಗರ್ಭಿಣಿಯರಿಗೆ ಅಂಗನವಾಡಿಯಲ್ಲಿ ಪೌಷ್ಠಿಕಾಂಶ ಆಹಾರ ಕೊಟ್ರೆ ಅವರು ಅಲ್ಲಿಗೆ ಬರುವುದಿಲ್ಲ. ಪ್ರೆಸ್ಟೀಜ್ ಸಮಸ್ಯೆ ಬರಲ್ಲಾ ಅಂತಾರೆ. ಮನೆ ಮನೆಗೆ ಹೋಗಿ ಕೊಡೋಕೆ ಅಂಗನವಾಡಿ ಕಾರ್ಯಕರ್ತೆಯರು ಒಪ್ತಿಲ್ಲ. ಹೇಗೆ ಯೋಜನೆ ಅನುಷ್ಠಾನ ಮಾಡುವುದು ಎಂದು ಅಧಿಕಾರಿ ಪ್ರಶ್ನೆ ಮುಂದಿಟ್ಟರು.
ಈ ಯೋಜನೆ ಬೇಡ ಎಂದು ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಪೌಷ್ಠಿಕಾಂಶದ ಆಹಾರದ ಬದಲು ಹಣ ಕೊಡೋದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು. ಇದೀವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.