ಹಾವೇರಿ: ಭಾರತೀಯ ಸೇನೆಯ 33ನೇ ರಾಷ್ಟ್ರೀಯ ರೈಫಲ್ಸ್ ಲಾನ್ಸ್ ನಾಯಕ ಆಗಿದ್ದ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದ ಯೋಧ ಶಿವಲಿಂಗೇಶ್ವರ ವೀರಭದ್ರಗೌಡ ಪಾಟೀಲ (26) ಪಾರ್ಥಿವ ಶರೀರಕ್ಕೆ ಸೋಮವಾರ ಬೆಳಿಗ್ಗೆ ನಗರದ ನೀಲನಗೌಡ್ರ ಬಡಾವಣೆಯಲ್ಲಿರುವ ಸ್ವಗೃಹದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಪಾರ್ಥೀವ ಶರೀರವು ಮನೆ ಬಳಿಗೆ ಬರುತ್ತಿದ್ದಂತೆಯೇ ತಂದೆ, ಮಾಜಿ ಯೋಧರಾದ ವೀರಭದ್ರಗೌಡ ಭಾವುಕರಾದರು. ತಾಯಿ, ತಂಗಿ ಹಾಗೂ ಸಂಬಂಧಿಕರ ಆಕ್ರಂಧನವು ಮುಗಿಲು ಮುಟ್ಟಿತ್ತು. ಬಳಿಕ ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಅಲ್ಲಿಂದ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಮೈಲಾರ ಮಹದೇವ ಮುಕ್ತಿಮಂದಿರ ತನಕ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಸಕ ಸಿ.ಎಂ. ಉದಾಸಿ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಕುಟುಂಬದವರು ನಿರ್ಧರಿಸಿದಂತೆ ಯೋಧರ ತವರೂರಾದ ಬ್ಯಾಡಗಿ ತಾಲ್ಲೂಕಿನ ಗುಂಡೇನಹಳ್ಳಿಯಲ್ಲಿ ಅಂತಿಮ ಸಂಸ್ಕಾರಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾರ್ಥೀವ ಶರೀರವನ್ನು ತರಲಾಯಿತು.
ಜಮ್ಮು ಕಾಶ್ಮೀರದ ನವಶೋರನಲ್ಲಿ ವಾರದ ಹಿಂದೆ ಉಗ್ರರ ವಿರುದ್ಧ ನಡೆದ ಕಾಯಾಚರಣೆಯಲ್ಲಿ ಗುಂಡು ತಗುಲಿ ಯೋಧ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ದೆಹಲಿಯ ಆರ್.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ವೀರಮರಣ ಹೊಂದಿದ್ದರು.