ಬೆಂಗಳೂರು: ರಾಜ್ಯದಲ್ಲಿ ಎಚ್1ಎನ್1 ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬಿಡಿಎ ಕ್ವಾಟ್ರಸ್ನಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಚ್1ಎನ್1 ವೈರಾಣು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ವರೆಗೆ ಒಟ್ಟು 456 ಪ್ರಕರಣಗಳು ದಾಖಲಾಗಿವೆ. ಜನವರಿ 2018ರಿಂದ ಇಲ್ಲಿಯವರಗೆ ಒಟ್ಟು 4902 ಜನರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 456 ಪ್ರಕರಣಗಳಲ್ಲಿ ಎಚ್1ಎನ್1 ರೋಗಾಣು ಇರುವುದು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಸಂಬಂಧ ಈಗಾಗಲೇ ಎಲ್ಲ ಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಜ್ವರ ಕಂಡು ಬಂದರೂ ಅಥವಾ ಈ ರೋಗದ ಲಕ್ಷಣದ ಅನುಭವವಾದರೆ ಕೂಡಲೇ ಜನರು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದರು.
ಇದನ್ನೂ ಓದಿ:ಬೆಳಗಾವಿಜಿಲ್ಲೆಯ ನಿಪ್ಪಾಣಿ ತಾಲ್ಲೂಕು: ಬಾಣಂತಿ ಸಾವು; ಎಚ್1ಎನ್1 ಶಂಕೆ
ಪ್ರತಿ ವರ್ಷ ಎಚ್1ಎನ್1 ಪ್ರಕರಣಗಳು ದಾಖಲಾಗುತ್ತಿವೆ. 2015ರಲ್ಲಿಯೇ ಎಚ್1ಎನ್1ನಿಂದ 94 ಮಂದಿ ಸಾವನ್ನಪ್ಪಿದ್ದರು. ಆ ನಂತರದ ವರ್ಷದಲ್ಲಿ ಮುಂಜಾಗೃತಿ ವಹಿಸಿದ್ದರಿಂದ ಎಚ್1ಎನ್1ನಿಂದಾಗಿ ಮೃತಪಟ್ಟವರ ಸಂಖ್ಯೆ ಇಳಿಮುಖವಾಗಿದೆ. 2017ರಲ್ಲಿ 3000 ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ ಕೂಡ ಎಚ್1ಎನ್1 ಆತಂಕ ಹರಡುತ್ತಿದೆ. ಈ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದರೆ ಗಾಬರಿಯಾಗದಂತೆ ಇಂಥ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಎಚ್1 ಎನ್1 ಪತ್ತೆಹಚ್ಚಲು ಯಾವುದೇ ಲ್ಯಾಬ್ ವ್ಯವಸ್ಥೆ ಇಲ್ಲ. ಹಾಗಾಗಿ ಆ ಭಾಗದಲ್ಲಿ ಸರ್ಕಾರಿ ಲ್ಯಾಬ್ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:15 ಎಚ್1ಎನ್1 ಪ್ರಕರಣ ಪತ್ತೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಎಚ್1 ಎನ್1ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ. ಗಾಳಿಯಲ್ಲಿ ರೋಗ ಹರಡುವುದರಿಂದ ರೋಗಿಯಿಂದ ಸ್ವಲ್ಪ ದೂರ ಇರುವುದು ಒಳ್ಳೆಯದು ಎಂದರು.
ಇದನ್ನೂ ಓದಿ:ಎಚ್1ಎನ್1: ಸೆಪ್ಟೆಂಬರ್ನಲ್ಲಿ 102 ಪ್ರಕರಣಗಳು
ದಾಖಲಾದ ಪ್ರಕರಣಗಳು
ವರ್ಷ | ಎಚ್1ಎನ್1ನಿಂದ ಮೃತಪಟ್ಟವರ ಸಂಖ್ಯೆ |
2015 | 94 |
2016 | ಯಾರೂ ಇಲ್ಲ |
2017 | 15 |
2018 | 6 |
2018ರಲ್ಲಿ ಮೃತಪಟ್ಟವರ ಸಂಖ್ಯೆ
ಬೆಂಗಳೂರು | 2 |
ಬೆಂಗಳೂರು ಗ್ರಾಮಾಂತರ | 1 |
ಅರಸೀಕೆರೆ | 1 |
ತುಮಕೂರು | 1 |
ಕಲುಬುರಗಿ | 1 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.