ಮೈಸೂರು: ಅಳಿವಿನಂಚಿನಲ್ಲಿರುವ ಜೀವ ಸಂಕುಲಗಳ ತಳಿ ಅಭಿವೃದ್ಧಿಗಾಗಿ ವಿವಿಧ ಮೃಗಾಲಯಗಳಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಅನೂಪ್ ಕುಮಾರ್ ನಾಯಕ್ ಸೋಮವಾರ ಇಲ್ಲಿ ತಿಳಿಸಿದರು.
ಮೈಸೂರು ಮೃಗಾಲಯ ವತಿಯಿಂದ ಆಯೋಜಿಸಿರುವ ‘ಅಖಿಲ ಭಾರತ ಮೃಗಾಲಯ ಪಶುವೈದ್ಯರ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
‘ದೇಶದಲ್ಲಿ 73 ಪ್ರಭೇದದ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಹೀಗಾಗಿ, ಆ ಪ್ರಾಣಿಗಳ ಸಂರಕ್ಷಣೆಗಾಗಿ ಮೃಗಾಲಯಗಳಲ್ಲಿ ತಳಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದ್ದು, ಹೈದರಾಬಾದ್ನಲ್ಲಿ ಯಶಸ್ಸು ಕೂಡ ಕಂಡಿದೆ. ರಾಷ್ಟ್ರೀಯ ವನ್ಯಜೀವಿಗಳ ವಂಶವಾಹಿ ಸಂಪನ್ಮೂಲ ಬ್ಯಾಂಕ್ ಸ್ಥಾಪಿಸಿ, ಇಲಿ ಮೂತಿ ಜಿಂಕೆ (ಮೌಸ್ ಡೀರ್) ತಳಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.
‘ಮೈಸೂರು ಮೃಗಾಲಯದಲ್ಲಿಯೂ ತಳಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸಿಂಗಳೀಕ, ತೋಳ, ಕಾಡೆಮ್ಮೆ, ಸೀಳುನಾಯಿ, ಕಾಡುಕೋಳಿ, ಮಲಬಾರ್ ಅಳಿಲು ಪ್ರಭೇದದ ತಳಿಗಳನ್ನು ಅದಕ್ಕಾಗಿ ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.