ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಬುಧವಾರ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ರತ್ನಗಿರಿಯಲ್ಲಿ 216 ಕಲಶಗಳಿಂದ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯಿತು. ಯಜ್ಞ ಶಾಲೆಯಲ್ಲಿ ಜಿನ ಸಹಸ್ರ ನಾಮ ವಿಧಾನ, ಧ್ವಜ ಪೂಜೆ, ಶ್ರೀಬಲಿ ವಿಧಾನ ಮತ್ತು ಮಹಾ ಮಂಗಳಾರತಿ ನಡೆದವು. ನಾನಾ ಭಾಗಗಳಿಂದ ಬಂದಿರುವ ಸಹಸ್ರಾರು ಭಕ್ತರು ಪಾದಾಭಿಷೇಕವನ್ನು ಕಣ್ತುಂಬಿಕೊಂಡರು.
ಮಹಾ ಮಸ್ತಕಾಭಿಷೇಕಕ್ಕೆ ಶೃಂಗಾರಗೊಂಡಿರುವ ಧರ್ಮಸ್ಥಳದ ಪಂಚ ಮಹಾವೈಭವ ವೇದಿಕೆಯಲ್ಲಿ ಭರತನ ಆಸ್ಥಾನ ವೈಭವ, ಆಯುಧಾಗಾರದಲ್ಲಿ ಚಕ್ರರತ್ನ ಉದಯ ಹಾಗೂ ಧರ್ಮಸ್ಥಳದಿಂದ ಶಾಂತಿವನದವರೆಗೆ ದಿಗ್ವಿಜಯ ಮೆರವಣಿಗೆಯ ರೂಪಕ ಪ್ರದರ್ಶನ ಜನರನ್ನು ಮಂತ್ರ ಮುಗ್ಧಗೊಳಿಸಿದವು.
ವೇಷ ಭೂಷಣಗಳು, ಕಲಾಮೇಳಗಳು, ಜಾನಪದ ಶೈಲಿಯ ವಾಲಗ, ಕೊಂಬು, ಕಹಳೆ, ನಗಾರಿ, ಡೊಳ್ಳುಕುಣಿತ, ಕೇರಳದ ಚೆಂಡೆವಾದನ, ಸೈನಿಕರು, ನಾಸಿಕ್ ಬ್ಯಾಂಡ್, ಸೈನಿಕರು ದಿಗ್ವಿಜಯ ಮೊರವಣಿಗೆಗೆ ವಿಶೇಷ ಮೆರುಗನ್ನು ನೀಡಿದವು. 30ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು.