ಬೆಂಗಳೂರು:ಮಾಗಡಿ ತಾಲ್ಲೂಕು ಕುದೂರು ಬಳಿ ಸಾಲು ಮರದ ತಿಮ್ಮಕ್ಕ ಅವರು ಬೆಳೆಸಿರುವ ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಸೂಚಿಸಿದ್ದಾರೆ.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಮಾಡಿದ ತಿಮ್ಮಕ್ಕ ಅವರು, ‘ಬಾಗೇಪಲ್ಲಿ– ಹಲಗೂರು ಮಾರ್ಗದ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದ್ದು, ಕುದೂರು ರಸ್ತೆ ಬದಿಯಲ್ಲಿ ನಾನು ಬೆಳೆಸಿರುವ ಮರಗಳನ್ನು ಕಡಿಯಲಾಗುತ್ತಿದೆ. ಮರಗಳನ್ನು ರಕ್ಷಿಸಬೇಕು’ ಎಂದು ಮನವಿ ಸಲ್ಲಿಸಿದರು.
ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಮುಖ್ಯಮಂತ್ರಿ, ರಸ್ತೆ ಬದಿಯ ಮರಗಳನ್ನು ಕಡಿಯದಂತೆ ಸೂಚಿಸಿದರು. ಅಗತ್ಯ ಬಿದ್ದಲ್ಲಿ ರಸ್ತೆ ಮಾರ್ಗ ಬದಲಿಸುವಂತೆ ಸಲಹೆ ಮಾಡಿದರು.
ಅಂಗವಿಕಲ ಮಹಿಳೆಗೆ ನೆರವು:
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅಂಗವಿಕಲ ಮಹಿಳೆ ಮಾಯಕ್ಕ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ₹50 ಸಾವಿರ ಮೊತ್ತದ ಚೆಕ್ ಅನ್ನು ಕುಮಾರಸ್ವಾಮಿ ವಿತರಿಸಿದರು.
ಅವರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ನೀಡಲು ವ್ಯವಸ್ಥೆ ಮಾಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಿದರು. ಮುಖ್ಯಮಂತ್ರಿ ಭೇಟಿ ಮಾಡಿದ್ದ ಮಾಯಕ್ಕ ನೆರವು ಕೋರಿದ್ದರು.