ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿ ಡಿ.ಕೆ.ಚೌಟ ಪುತ್ರಿ ಪ್ರಜ್ಞಾ ಪ್ರಾಣಿಪ್ರಿಯೆ

ಕುಶಾಲನಗರ: ದುಬಾರೆ ಕಾಡಿನ ಮಧ್ಯೆ ‘ಆನೆಮನೆ’ ಸ್ಥಾಪನೆ
Last Updated 19 ಜೂನ್ 2019, 13:26 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ದುಬಾರೆ ಸಾಕಾನೆ ಶಿಬಿರದ ಅರಣ್ಯ ಪ್ರದೇಶದ ಮಧ್ಯೆಯಿರುವ ಖಾಸಗಿ ಒಡೆತನದ ಜಾಗದಲ್ಲಿ ಒಂದಿಷ್ಟು ಕಾಡಿದೆ. ಆ ಕಾಡಿನ ಮಧ್ಯೆ ಕಾಫಿ ತೋಟವೂ ಇದೆ. ಆ ಸುಂದರ ದಟ್ಟ ಅರಣ್ಯದ ಮಧ್ಯೆ ಆಕರ್ಷಣಿಯವಾದ ‘ಆನೆಮನೆ’ಯೊಂದಿದೆ.

– ಈ ‘ಆನೆಮನೆ’ಯೇ ಹಿರಿಯ ರಂಗಕರ್ಮಿ ಡಿ.ಕೆ.ಚೌಟ ಅವರ ಪುತ್ರಿ ವನ್ಯಜೀವಿ ತಜ್ಞೆ ಹಾಗೂ ಸಂಶೋಧಕಿ ಪ್ರಜ್ಞಾ ಚೌಟ ಅವರ ವಾಸಸ್ಥಾನ.

ಆನೆಮನೆಯಲ್ಲಿ ಕಲ್ಪನಾ ಎಂಬ ಹೆಣ್ಣಾನೆ ಹಾಗೂ ಮೂರು ಮರಿಯಾನೆಗಳೂ ಸೇರಿದಂತೆ ಒಟ್ಟು ಏಳು ಸಾಕಾನೆಗಳಿವೆ. ಈ ಆನೆಮನೆಯ ಒಡತಿಯೇ ಮಂಗಳೂರಿನ ವನ್ಯಜೀವಿ ತಜ್ಞೆ ಪ್ರಜ್ಞಾ ಚೌಟ.

ಲಂಡನ್‌ನಲ್ಲಿ ಸಮಾಜ ವಿಜ್ಞಾನ ಸ್ನಾತಕೋತ್ತರ ಪದವಿ ಮುಗಿಸಿ, ಬಂದ ಪ್ರಜ್ಞಾ ಆನೆ ತಜ್ಞಳಾಗಿ, ಸಂಶೋಧಕಿಯಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅರಣ್ಯದ ಮಧ್ಯೆ ವಾಸಿಸುವ ಆದಿವಾಸಿ ಗಿರಿಜನರ ಸಂಸ್ಕೃತಿ ಪರಂಪರೆ ಬಗ್ಗೆ ಆಕರ್ಷಿತರಾದ ಪ್ರಜ್ಞಾ ಚೌಟ ಅವರು, ಬಿಹಾರ, ಅಸ್ಸಾಂ, ಕೇರಳ ಹಾಗೂ ಕರ್ನಾಟಕದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ಆದಿವಾಸಿಗಳ ಕುರಿತು ಅಧ್ಯಯನ ನಡೆಸಲು ಅರಣ್ಯಗಳಿಗೆ ಭೇಟಿ ನೀಡಿದ್ದ ವೇಳೆ ಹಾಗೂ ಖಾಸಗಿ ಒಡೆತನದಲ್ಲಿರುವ ಆನೆಗಳ ಸ್ಥಿತಿಗತಿ ಹಾಗೂ ಸರ್ಕಸ್ ಕಂಪನಿಗಳಲ್ಲಿ ಇವುಗಳ ಬಳಕೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ನಂತರ, ‘ಆನೆಗಳ ಸಂತತಿ ಉಳಿಯಬೇಕು. ಖಾಸಗಿ ಒಡೆತನದವರು ಲಾಭಕ್ಕಾಗಿ ಆನೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು’ ಎಂಬ ಆಲೋಚನೆಗಳೂ ಪ್ರಜ್ಞಾಗೆ ಮೂಡಿದ್ದವು. ಇದರೊಂದಿಗೆ ಆನೆಗಳ ಸಂರಕ್ಷಣೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ದೃಢ ನಿರ್ಧಾರ ಕೈಗೊಂಡಿದ್ದರು. ಅಧ್ಯಯನ ಪ್ರವಾಸದ ಸಂದರ್ಭ ಪರಿಚಯವಾದ ಫ್ರೆಂಚ್ ಚಿತ್ರ ನಿರ್ಮಾಪಕ ಫಿಲಿಪ್ ಗೌಟಿಯಾರ್ ಅವರನ್ನು 1993ರಲ್ಲಿ ವಿವಾಹವಾದರು. ಇವರಿಗೆ 12 ವರ್ಷದ ಓಜಲ್ ಎಂಬ ಮಗಳಿದ್ದು, ಫ್ರಾನ್ಸ್‌ನಲ್ಲಿರುವ ಫಿಲಿಪ್ ಅವರ ಪೋಷಕರ ಬಳಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

2002ರಲ್ಲಿ ಪ್ರಜ್ಞಾ ಚೌಟ ಆನೆಗಳ ಪರಂಪರೆಯನ್ನು ಉಳಿಸಿ–ಬೆಳೆಸುವ ಉದ್ದೇಶದಿಂದ ‘ಆನೆಮನೆ ಫೌಂಡೇಷನ್’ ಸ್ಥಾಪಿಸಿದ್ದರು. ಆನೆ ಸಾಕಲು ಸರ್ಕಾರದಿಂದ ಅನುಮತಿ ಪಡೆದು, ದುಬಾರೆಯ ದಟ್ಟ ಅರಣ್ಯದ ಮಧ್ಯೆಯಿರುವ ಖಾಸಗಿ ಅವವರ 2 ಎಕರೆ ಭೂಮಿ ಖರೀದಿಸಿ, ಅಲ್ಲಿ ಆನೆಮನೆ ನಿರ್ಮಿಸಿದರು. ಕೇರಳದ ವೈನಾಡಿನ ವನ್ಯಜೀವಿ ಅಭಯಾರಣ್ಯದಲ್ಲಿ ತರಬೇತಿ ಪಡೆದಿದ್ದಾರೆ. ನಂತರ, ದೇಶದ ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ನಾಲ್ಕು ಆನೆಗಳೊಂದಿಗೆ ಸುಮಾರು 350 ಕಿ.ಮೀ ಸಫಾರಿ ನಡೆಸಿದ ಇವರು ಕಾಡಿನಲ್ಲಿಯೇ ಹಗಲು–ರಾತ್ರಿ ಕಳೆದು ತಮ್ಮ ಧೈರ್ಯವನ್ನು ಪ್ರದರ್ಶಿಸಿದ್ದಾರೆ.

ಸಂವೇದಾನಶೀಲ ಮತ್ತು ಬುದ್ಧಿವಂತ ಪ್ರಾಣಿಯಾದ ದೊಡ್ಡ ಸಸ್ತನಿಗಳ ಅಭಿವೃದ್ಧಿಗೆ ತೀರ್ಮಾನಿಸಿ, ಪತಿ ಫಿಲಿಪ್ ಗೌಟಿಯಾರ್‌ ಅವರೊಂದಿಗೆ ದಕ್ಷಿಣ ಭಾರತದ ಆನೆ ಕಾರಿಡಾರ್ ದುಬಾರೆ ಕಾಡಿನ ಮಧ್ಯೆ ಆನೆಮನೆ ಶಿಬಿರದಲ್ಲಿ ಏಳು ಆನೆಗಳ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದುಬಾರೆ ಕಾಡಿನ ಮಧ್ಯೆಯಿರುವ ಆನೆ ಮನೆಗೆ ದುಬಾರೆಯಲ್ಲಿ ಕಾವೇರಿ ನದಿ ದಾಟಿ ಕಾಡಿನ ಮಧ್ಯೆಯಿರುವ ಕಾಲುದಾರಿಯಲ್ಲಿ ತೆರಳಬೇಕು. ಇಲ್ಲದಿದ್ದಲ್ಲಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ- ಮಾಲ್ದಾರೆ ಮಾರ್ಗವಾಗಿ ಜೀಪಿನಲ್ಲಿ ತೆರಳಬಹುದು.

ಆನೆಗಳ ತಳಿಗಳ ವಾಸಸ್ಥಾನ, ಬಂಧನದಲ್ಲಿ ಆನೆಗಳು, ಆನೆಗಳನ್ನು ಎಲ್ಲಿ ಸಾಕಬೇಕು, ನೀರು ಸ್ನಾನ, ಆಹಾರ ಕೆಲಸ ಮತ್ತು ಚಟುವಟಿಕೆ, ಮಾವುತರು, ಆರೋಗ್ಯ ರಕ್ಷಣೆ ಕುರಿತು ಅಳವಾದ ಅಧ್ಯಯನ ನಡೆಸಿದ್ದಾರೆ.

ಸುಮಾರು 17 ವರ್ಷಗಳಿಂದ ಕಾಡಿನಲ್ಲೇ ಒಂಟಿ ಮನೆಯಲ್ಲಿ ನೆಲೆಸಿರುವ ಈ ದಂಪತಿಗೆ ಆನೆಗಳೇ ಕುಟುಂಬದ ಸದಸ್ಯರು. ಇದುವರೆಗೂ ಕಾಡಾನೆಗಳಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ. ಬಾಲ್ಯದಿಂದಲೇ ಧೈರ್ಯಶಾಲಿಯಾದ ನನಗೆ ಈ ಕಾಡಿನ ಮಧ್ಯೆಯಿರಲು ಸ್ಪಲ್ಪವೂ ಹೆದರಿಕೆ ಆಗುವುದಿಲ್ಲ ಎಂದು ಹೇಳುತ್ತಾರೆ.

ಕಾಡಾನೆ ಮಾನವ ಸಂಘರ್ಷ ತಪ್ಪಬೇಕು. ಕಾಡಾನೆಗಳು, ಸ್ವಚ್ಛಂದವಾಗಿ ತಮ್ಮ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಕ್ಷೀಣಿಸುತ್ತಿದೆ. ಆದರೆ, ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಾನವರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಆಹಾರ ಕೊರತೆಯಿಂದ ಕಾಡಾನೆಗಳು ನಾಡಿಗೆ ಲಗ್ಗೆ ಹಾಕುತ್ತಿವೆ. ಇದಕ್ಕೆ ನಾವೇ ಕಾರಣ ಎಂದು ಪ್ರಜ್ಞಾ ಚೌಟ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT