ಬೆಂಗಳೂರು: ದೆಹಲಿ ಹೈಕೋರ್ಟ್ನಿಂದ ಜಾಮೀನುಪಡೆದು ಬೆಂಗಳೂರಿಗೆ ಆಗಮಿಸುತ್ತಿರುವ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆತಿದೆ.
ವಿಮಾನ ಇಳಿದು ಹೊರಗೆ ಬರುತ್ತಿದ್ದಂತೆ ಅವರನ್ನು ಸುತ್ತುವರಿದ ಅಭಿಮಾನಿಗಳು ಜೈಕಾರ ಕೂಗುತ್ತಿದ್ದರು. ಭಾರಿ ಗಾತ್ರದ ಹೂವಿನ ಹಾರಗಳನ್ನು ಹಾಕಿ ಹರ್ಷೋದ್ಘಾರಗಳು ಕೇಳಿಬಂದವು.
ಗಡ್ಡದಾರಿಯಾಗಿರುವ ಡಿ.ಕೆ.ಶಿವಕುಮಾರ್ ಅರ್ಧತೋಳಿನ ಅಂಗಿ ಧರಿಸಿ ಹೊರಗೆ ಬರುತ್ತಿದ್ದಂತೆ ಹರ್ಷಚಿತ್ತರಾಗಿದ್ದಂತೆ ಕಂಡು ಬಂದರು. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಪ್ರಕರಣ ದಾಖಲಿಸಿದ್ದು, ಕಾರಾಗೃಹ ವಾಸ ಅನುಭವಿಸಿದ್ದರು.
ರಾಮನಗರ ಜಿಲ್ಲೆಯ ಕನಕಪುರ, ಸಾತನೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಅಭಿಮಾನಿಗಳು ಶಿವಕುಮಾರ್ ಆಗಮನವನ್ನು ಕಾಯುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.