ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ಗಾವಣೆ: ಸಚಿವರು ಮೂಗು ತೂರಿಸುವಂತಿಲ್ಲ’

ವರ್ಗಾವಣೆಯಲ್ಲಿ ಸಚಿವರು ಮೂಗು ತೂರಿಸುವಂತಿಲ್ಲ: ಸುತ್ತೋಲೆ
Last Updated 17 ಅಕ್ಟೋಬರ್ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅನುಮೋದಿಸಿದ ವರ್ಗಾವಣೆಗಳಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸಚಿವರು ಇನ್ನು ಮುಂದೆ ಮೂಗು ತೂರಿಸುವಂತಿಲ್ಲ!

ಮುಖ್ಯಮಂತ್ರಿ ಅವರ ಸೂಚನೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಮಂಗಳವಾರ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ವರ್ಗಾವಣೆಗೊಂಡ ಸ್ಥಳಗಳಿಗೆ ನೇರವಾಗಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಕೆಎಎಸ್‌, ಮುಖ್ಯ ಎಂಜಿನಿಯರ್‌ಗಳು ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರ ವರ್ಗಾವಣೆಗೆ ಈ ಸುತ್ತೋಲೆ ಅನ್ವಯವಾಗಲಿದೆ. ಇದು ಮೈತ್ರಿ ಸರ್ಕಾರದಲ್ಲಿ ಇನ್ನೊಂದು ಸುತ್ತಿನ ಸಂಘರ್ಷಕ್ಕೂ ಹಾದಿ ಮಾಡಿಕೊಡುವ ಸಾಧ್ಯತೆ ಇದೆ.

ಜಲಸಂಪನ್ಮೂಲ ಇಲಾಖೆಯ 25 ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪೈಕಿ ಐದು ಮಂದಿಗೆ ಮಾತ್ರ ಸ್ಥಳ ನಿಯೋಜನೆ ಮಾಡಲಾಗಿತ್ತು. ಉಳಿದ 21 ಮಂದಿ ಒಂದು ತಿಂಗಳು ಅತಂತ್ರರಾಗಿದ್ದರು. ಬಳಿಕ ಶಿವಕುಮಾರ್ ಅವರು ಮರು ಆದೇಶ ಹೊರಡಿಸಿದ್ದರು. ಈ ಸುತ್ತೋಲೆ ಪ್ರಕಾರ, ಇನ್ನು ಮುಂದೆ ಮರು ಆದೇಶ ಹೊರಡಿಸಲು ಅವಕಾಶ ಇಲ್ಲ.

‘ಇನ್ನು ಮುಂದೆ ಮುಖ್ಯಮಂತ್ರಿಯವರಿಂದ ಅನುಮೋದನೆಗೊಂಡ ಪ್ರಕರಣಗಳಲ್ಲಿ ವಿವಿಧ ಇಲಾಖೆಗಳ ನಿಗಮ, ಮಂಡಳಿ, ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಹುದ್ದೆಗಳಿಗೆ ನೇರವಾಗಿ ಸ್ಥಳ ನಿಯುಕ್ತಿಗೊಳಿಸಬೇಕು. ಇಂತಹ ಪ್ರಕರಣಗಳಲ್ಲಿ ಆಡಳಿತ ಇಲಾಖೆಗಳು ಮರುಸ್ಥಳ ನಿಯುಕ್ತಿ ಆದೇಶ ನೀಡುವ ಅಗತ್ಯವಿಲ್ಲ’ ಎಂದೂ ಸುತ್ತೋಲೆ ತಿಳಿಸಿದೆ.

ಈ ವಿಷಯವನ್ನು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಗಮನಕ್ಕೆ ತರುತ್ತೇನೆ
-ಯು.ಟಿ.ಖಾದರ್ನಗರಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT