ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕರೆ ನೀಡಿರುವ ಹೊರ ರೋಗಿ ವಿಭಾಗ (ಒಪಿಡಿ) ಬಂದ್ಗೆ ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿಮಿಶ್ರ ಪ್ರತಿಕ್ರಿಯೆ
ಬೃಂದಾವನ, ಸುಗುಣಾ, ಫೋರ್ಟಿಸ್ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಿದ್ದು, ತುರ್ತು ಚಿಕಿತ್ಸೆನೀಡಲಾಗುತ್ತಿದೆ. ಕಿಮ್ಸ್ ಸೇರಿದಂತೆ ಇನ್ನೂ ಕೆಲವು ಆಸ್ಪತ್ರೆಯಲ್ಲಿ ಒಪಿಡಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.ಮಿಂಟೊ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ಪ್ರತಿಭಟನಾನಿರತ ಹಿರಿಯ ವೈದ್ಯರು ಪ್ರಧಾನಿಗೆ ವೈದ್ಯರ ಮೇಲಿನ ಹಲ್ಲೆಯ ಕುರಿತು ಪತ್ರ ಬರೆಯುತ್ತಿದ್ದಾರೆ. ಕರವೇ ಕಾರ್ಯಕರ್ತರ ಬಂಧನದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಳಿಸುವ ವಿಚಾರವಾಗಿ ಕಿರಿಯ ವೈದ್ಯರ ಸಂಘದ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.
ಯಾದಗಿರಿ: ಆಸ್ಪತ್ರೆ, ಸ್ಕ್ಯಾನಿಂಗ್ ಕೇಂದ್ರ ಬಂದ್
ಯಾದಗಿರಿ ಜಿಲ್ಲೆಯ ವಿವಿಧೆಡೆಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಆಸ್ಪತ್ರೆಗಳ ಮುಂದೆ ನೋಟಿಸ್ ಅಂಟಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಎಂದಿಗಿಂತ ತುಸು ಹೆಚ್ಚಾಗಿದೆ.
ಮಂಗಳೂರು: ಓಪಿಡಿ ಬಂದ್- ರೋಗಿಗಳ ಪರದಾಟ
ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗಗಳು ಕಾರ್ಯ ಸ್ಥಗಿತಗೊಳಿಸಿವೆ. ಬೇರೆ ಜಿಲ್ಲೆಗಳಿಂದ ಬಂದಿದ್ದ ಹಲವು ರೋಗಿಗಳು ಪರದಾಡುವಂತಾಯಿತು. ಪ್ರಮುಖವಾಗಿ ಕಾಸರಗೋಡಿನಿಂದ ಬಂದಿದ್ದ ರೋಗಿಗಳು, ವೈದ್ಯಕೀಯ ಚಿಕಿತ್ಸೆ ಸಿಗದೇ ಊರಿಗೆ ಮರಳಿದರು.
ಐಎಂಎ ಅಧ್ಯಕ್ಷರಾದ ಮಂಗಳೂರು ಶಾಖೆಯ ಡಾ.ಎಂ ಅಣ್ಣಯ್ಯ ಕುಲಾಲ್ ಮತ್ತು ಉಡುಪಿ ಶಾಖೆಯ ಡಾ. ಉಮೇಶ್ ಪ್ರಭು ಪ್ರತಿಕ್ರಿಯಿಸಿ, ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸುತ್ತೇವೆ. ಇದೇ ಕಾರಣಕ್ಕಾಗಿ ಶುಕ್ರವಾರ ಖಾಸಗಿ ಒಪಿಡಿ ವಿಭಾಗ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ವೈದ್ಯರು ಕಪ್ಪು ಪಟ್ಟಿ ಧರಿಸಿ ಸೇವೆ ನೀಡಲಿದ್ದಾರೆ ಎಂದಿದ್ದಾರೆ.
ಈ ರೀತಿಯ ಘಟನೆಗಳು ಪುನಃ ನಡೆಯದಂತೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಲಬುರ್ಗಿ: ಒಪಿಡಿ ಬಂದ್
ಖಾಸಗಿ ಆಸ್ಪತ್ರೆಗಳ ಒಪಿಡಿ (ಹೊರರೋಗಿಳ ವಿಭಾಗ) ಬಂದ್ ಕರೆಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಯುನೈಟೆಡ್ ಆಸ್ಪತ್ರೆ ಹಾಗೂ ಖಾಜಾ ಬಂದೇನವಾಜ ವೈದ್ಯಕೀಯ ಕಾಲೇಜಿನ ಒಪಿಡಿ ವಿಭಾಗಗಳು ಬಂದ್ ಆಗಿವೆ.
ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳ ನೋಂದಣಿ ಪಡೆಯಲಾಗುತ್ತಿದೆ. ಘಟನೆ ಖಂಡಿಸಿ ಐಎಂಎ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರಿನಜೆಎಸ್ಎಸ್ ಸೇರಿದಂತೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇದ್ದರೆ, ಭಾನವಿ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸ್ಥಗಿತಗೊಂಡಿದೆ.
ಕೆ.ಆರ್.ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಹಿರಿಯ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಬಂದ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.