ದಾವಣಗೆರೆ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಾಲಿಕೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜೆ.ಎನ್. ಶ್ರೀನಿವಾಸ್ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆ ಪ್ರಕರಣ ಸಂಬಂಧ ಸಂತೋಷ್, ಸದ್ದಾಂ, ವಿಶಾಖ್ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಘಟನೆ ವಿವರ: ಕೆಟಿಜೆ ನಗರದಲ್ಲಿರುವ ಮಂಜುಶ್ರೀ ಆನ್ಲೈನ್ ನೆಟ್ ಅಂಡ್ ಕಮ್ಯುನಿಕೇಷನ್ ಸೆಂಟರ್ನಲ್ಲಿ ಮತದಾರರಿಗೆ ಚೀಟಿ ನೀಡಲಾಗುತ್ತಿತ್ತು. ಈ ಸಂದರ್ಭ ಶ್ರೀನಿವಾಸ್ ಕರೆ ಮಾಡಿ ಚೀಟಿ ಕೊಡುವುದನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದರು. ಇದಕ್ಕೆ ಬಗ್ಗದ್ದಿದ್ದಾಗ ಅಂಗಡಿಗೆ ಬಂದು ಹಲ್ಲೆ ನಡೆಸಿದರು ಎಂದು ಪ್ರವೀಣ್ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದಾರೆ.
ಶ್ರೀನಿವಾಸ್ ಅವರನ್ನು ಬಂಧಿಸಿದ್ದು, ಉಳಿದವರನ್ನೂ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ‘ಪ್ರಜಾವಾಣಿ’ಗೆ ತಿಳಿಸಿದರು.