ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮಿಣಜಗಿ ಹತ್ತಿರ ಡೋಣಿ ನದಿಯಲ್ಲಿ ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿದ್ದು, 350ಕ್ಕೂ ಹೆಚ್ಚು ಕುರಿಗಳು, ಮೂವರು ಕುರಿಗಾಹಿಗಳು ನದಿ ನಡುವಿನ ಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ.
ಡೋಣಿ ನದಿ ನಡುಗಡ್ಡೆಯಲ್ಲಿ ಸೊಂಪಾದ ಹುಲ್ಲು ಬೆಳೆದಿದ್ದು, ನೀರಿನ ಹರಿವು ಕಡಿಮೆ ಇರುವುದರಿಂದ ಮಂದೆ ಮೇಯಿಸಲು ಕುರಿಗಾಹಿಗಳು ಅಲ್ಲಿಗೆ ತೆರಳಿದ್ದರು. ಸಂಜೆ ಮನೆಗೆ ಬರುವ ಸಮಯದಲ್ಲಿ ಪ್ರವಾಹ ಉಂಟಾ ಗಿದ್ದು, ಮೊಬೈಲ್ ಫೋನ್ ಮೂಲಕ ಕುಟುಂಬಗಳನ್ನು ಸಂಪರ್ಕಿಸಿದ್ದಾರೆ.
ಪೊಲೀಸ್ ತಂಡ, ಅಗ್ನಿ ಶಾಮಕ ದಳದವರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಕ್ಕೆ ಕ್ರಮ ಕೈಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿಯೂ ಸಂಜೆಯಿಂದ ಗುಡುಗು ಮಿಂಚಿನೊಂದಿಗೆ ಮಳೆ ಹನಿಯುತ್ತಿದೆ. ಶಿರಸಿಯಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ.