ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಗೆ ಚಕ್ಕರ್; ಸಂಬಳಕ್ಕೇ ಕತ್ತರಿ!

ಸಚಿವಾಲಯದ 900ಕ್ಕೂ ಹೆಚ್ಚು ನೌಕರರಿಗೆ ಶೋಕಾಸ್‌ ನೋಟಿಸ್‌– ಡಿಪಿಎಆರ್‌ನಿಂದ ಪಟ್ಟಿ ಸಿದ್ಧ
Last Updated 21 ಜುಲೈ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವಾಲಯದ ನೌಕರರು ಇನ್ನು ಮುಂದೆ ಇಷ್ಟಬಂದಂತೆ ಕಚೇರಿಗೆ ಬಂದರೆ, ಕೆಲಸದ ಅವಧಿಯಲ್ಲಿ ಕಚೇರಿ ಬಿಟ್ಟು ಎಲ್ಲೆಂದರಲ್ಲಿ ಸುತ್ತಾಡಿದರೆ, ಮನಸ್ಸಿಗೆ ಬಂದಂತೆ ಕಚೇರಿಯಿಂದ ನಿರ್ಗಮಿಸಿದರೆ, ಆ ದಿನದ ಸಂಬಳಕ್ಕೇ ಕತ್ತರಿ ಬೀಳಲಿದೆ.

ಬಯೋಮೆಟ್ರಿಕ್‌ ಹಾಜರಾತಿ ಪರಿಶೀಲಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌), ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದ ಮತ್ತು ಮಿಸ್‌ ಫ್ಲಾಶ್‌ (ಬಯೋಮೆಟ್ರಿಕ್‌ನಲ್ಲಿ ನಮೂದು ಇಲ್ಲದ) ಆಗಿರುವ 900ಕ್ಕೂ ಹೆಚ್ಚು ಸಿಬ್ಬಂದಿಗೆ ಶೋಕಾಸ್‌ ನೋಟಿಸ್‌ ನೀಡಲು ಮುಂದಾಗಿದೆ. ಅಷ್ಟೇ ಅಲ್ಲ, ಆ ದಿನಗಳನ್ನು ‘ವೇತನರಹಿತ ರಜೆ’ (ಎಲ್‌ಡಬ್ಯೂಎ) ಎಂದು ಪರಿಗಣಿಸುವ ಎಚ್ಚರಿಕೆ ನೀಡಿದೆ.

ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ 31 ಇಲಾಖೆಗಳ ಸಿಬ್ಬಂದಿಯ ಬಯೋಮೆಟ್ರಿಕ್‌ ಹಾಜರಾತಿಯನ್ನು ಡಿಪಿಎಆರ್‌ನ ಆಡಳಿತ ಸುಧಾರಣಾ ವಿಭಾಗ ಪರಿಶೀಲಿಸಿ, ಕಚೇರಿಗೆ ನಿಗದಿತ ಸಮಯದಲ್ಲಿ ಹಾಜರಾಗದಿರುವ ಮತ್ತು ಮಿಸ್‌ ಫ್ಲಾಶ್‌ ಆಗಿರುವವರ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿ ಇದೀಗ ಡಿಪಿಎಆರ್‌ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಮಂಜುಳಾ ಅವರ ಕೈ ಸೇರಿದೆ.

‘ಇದೇ ಬುಧವಾರದ (ಜುಲೈ 24) ಒಳಗೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಈ ಪಟ್ಟಿ ರವಾನೆ ಆಗಲಿದೆ. ಕಚೇರಿ ಸಮಯದಲ್ಲಿ ತಪ್ಪಿಸಿಕೊಂಡ ತಮ್ಮ ಇಲಾಖೆಯ ಸಿಬ್ಬಂದಿಗೆ ಸಂಬಂಧಪಟ್ಟಂತೆ ನೋಟಿಸ್‌ ನೀಡುವ ಮತ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರು ನಿರ್ಧರಿಸಲಿದ್ದಾರೆ. ಮೊದಲ ಹೆಜ್ಜೆಯಾಗಿ ಆಡಳಿತ ಸುಧಾರಣೆ ವಿಭಾಗದಲ್ಲಿ ಕೆಲಸ ಮಾಡುವ 23 ನೌಕರರಿಗೆ ನೋಟಿಸ್‌ ನೀಡಲಾಗಿದೆ’ ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.

ಸಚಿವಾಲಯದ ನೌಕರರ ಮಧ್ಯೆ ಈಗ ಈ ಶೋಕಾಸ್‌ ನೋಟಿಸ್‌ನದ್ದೇ ಮಾತು. ನೋಟಿಸ್‌ ಸಿಕ್ಕಿದವರು ಮತ್ತು ನೋಟಿಸ್‌ನ ನಿರೀಕ್ಷೆಯಲ್ಲಿರುವವರು, ‘ಏನು ಕಾರಣ ಕೊಡೋಣ’ ಎಂಬ ‌ಚಿಂತೆಯಲ್ಲಿದ್ದಾರೆ

2019ರ ಜನವರಿಯಿಂದ ಮೇ ತಿಂಗಳವರೆಗಿನ ಒಟ್ಟು 115 ಸರ್ಕಾರಿ ಕರ್ತವ್ಯ ದಿನಗಳ ಬಯೋಮೆಟ್ರಿಕ್‌ ಹಾಜರಾತಿಯನ್ನು ಡಿಪಿಎಆರ್‌ (ಆಡಳಿತ ಸುಧಾರಣೆ ತಪಾಸಣೆ) ಅಧಿಕಾರಿಗಳು ಪರಿಶೀಲಿಸಿದಾಗ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಕಚೇರಿಗೆ ತಡವಾಗಿ ಬಂದಿರುವ ಮತ್ತು ಮಿಸ್‌ ಫ್ಲಾಶ್‌ ಆಗಿರುವ ಮಾಹಿತಿ ಸಿಕ್ಕಿದೆ. ನೌಕರರ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಅಂಥವರಿಗೆ ಕಾರಣ ಕೇಳುವ ನೋಟಿಸ್‌ ನೀಡಲಿದೆ.

ಪ್ರತಿಯೊಬ್ಬ ನೌಕರ ಎಷ್ಟು ದಿನ ಕಚೇರಿಗೆ ತಡವಾಗಿ ಬಂದಿದ್ದಾರೆ, ಎಷ್ಟು ದಿನ ಕಚೇರಿಯಿಂದ ಬೇಗನೆ ನಿರ್ಗಮಿಸಿದ್ದಾರೆ, ಮಿಸ್‌ ಫ್ಲಾಶ್‌ ಆಗಿರುವ ದಿನಗಳೆಷ್ಟು ಎಂದು ಪ್ರತ್ಯೇಕ ಪಟ್ಟಿ ತಯಾರಿಸಲಾಗಿದೆ. ಇಂತಹ ದಿನಗಳನ್ನು ‘ವೇತನರಹಿತ ರಜೆ’ ಎಂದು ಏಕೆ ಪರಿಗಣಿಸಬಾರದೆಂದು ನೋಟಿಸ್‌ ತಲುಪಿದ ಮೂರು ದಿನಗಳ ಒಳಗೆ ವಿವರಣೆ ಸಲ್ಲಿಸಲು ಸೂಚಿಸಲಾಗಿದೆ. ವಿವರಣೆ ನೀಡದಿದ್ದರೆ, ಏಕಪಕ್ಷೀಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ.

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ

ನೌಕರ ಕಚೇರಿ ಸಮಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ 2012ರ ಜೂನ್‌ 29ರಂದೇ ಸ್ಪಷ್ಟ ಸೂಚನೆಯೊಂದಿಗೆ ಆದೇಶ ಹೊರಡಿಸಿತ್ತು. ಏಕರೂಪದ ಸಮಯ ಪಾಲಿಸುವ ಉದ್ದೇಶದಿಂದ ಎಲ್ಲ ನೌಕರರು 10 ಗಂಟೆಯಿಂದ 5.30ರವರೆಗೆ ಕಚೇರಿಯಲ್ಲಿ ಹಾಜರಿರಬೇಕು ಎಂದು ಆ ಆದೇಶದಲ್ಲಿದೆ. ‘ಕಚೇರಿಗೆ ಬರುವ ನೌಕರರು ಬೆಳಿಗ್ಗೆ 10.10 ಗಂಟೆಯ ಒಳಗೆ ಬಯೋಮೆಟ್ರಿಕ್‌ ಹಾಜರು ನಮೂದಿಸಬೇಕು ಮತ್ತು ಸಂಜೆ 5.30ರ ನಂತರ ಕಚೇರಿ ಬಿಡಬೇಕು. ಕಚೇರಿ ಸಮಯದಲ್ಲಿ ಅವರವರ ಸ್ಥಾನಗಳಲ್ಲಿ ಇರಬೇಕು’ ಎಂದೂ ಆದೇಶದಲ್ಲಿ ಸೂಚಿಸಲಾಗಿತ್ತು.

ನೌಕರರು ನಿಗದಿತ ಸಮಯದಲ್ಲಿ ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಪಿಎಆರ್‌, 2018ರ ನವಂಬರ್‌ನಲ್ಲಿ ಮೂವರು ನೌಕರರಿಗೆ ನೋಟಿಸ್‌ ನೀಡಿತ್ತು. ಅಲ್ಲದೆ, ವೇತನವನ್ನೂ ಕಡಿತಗೊಳಿಸಿತ್ತು. ಆದರೆ, ಈ ಕ್ರಮದ ಬಳಿಕವೂ ಯಾರೂ ಎಚ್ಚೆತ್ತುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT