ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 31 ಫೀವರ್ ಕ್ಲಿನಿಕ್‌ ಪ್ರಾರಂಭ: ಡಾ.ಕೆ. ಸುಧಾಕರ್

Last Updated 26 ಮಾರ್ಚ್ 2020, 13:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮೂವತ್ತೊಂದು ಫೀವರ್ ಕ್ಲಿನಿಕ್‌ (ಜ್ವರ ಚಿಕಿತ್ಸಾಲಯ) ಗಳು ನಾಳೆಯಿಂದ ಕಾರ್ಯಾರಂಭ ಮಾಡಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕಾರ್ಯಪಡೆಯ ಅಧ್ಯಕ್ಷ ಡಾ.ಕೆ. ಸುಧಾಕರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಎರಡು ತಿಂಗಳಲ್ಲಿ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಿ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರು ಈ ಚಿಕಿತ್ಸಾಲಯಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗಬಹುದಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರ ಜನರನ್ನು ಈ ಚಿಕಿತ್ಸಾಲಯಗಳಲ್ಲಿ ತಪಾಸಣೆಗೆ ಒಳಪಡಿಸಲಾಗುವುದು ಎಂದರು.

ಜನವರಿ 21ರಿಂದ ಈವರೆಗೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಮಂದಿ ಬೆಂಗಳೂರಿಗೆ ವಿದೇಶಗಳಿಂದ ಆಗಮಿಸಿದ್ದು ಅವರೆಲ್ಲರ ಪ್ರವಾಸಿ ಚರಿತ್ರೆ ಸರ್ಕಾರದಲ್ಲಿ ಲಭ್ಯವಿದೆ. ಆದರೆ, ಅವರಲ್ಲಿ ಕೇವಲ 1500 ಮಂದಿಯನ್ನು ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಇದೀಗ ವಿದೇಶಗಳಿಂದ ಆಗಮಿಸಿರುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ವ್ಯಕ್ತಿಯಲ್ಲಿ ಆತ್ಮ ವಿಶ್ವಾಸ ಮೂಡಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಆತಂಕ ನಿವಾರಣೆಯಾಗಲಿದೆ ಎಂದು ಸಚಿವರು ವಿವರಿಸಿದರು.

ತ್ರೀ-ಟಿ !
ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯ ಸರ್ಕಾರವು ತ್ರೀ-ಟಿ ( ಟ್ರೇಸ್-ಟೆಸ್ಟ್ ಅಂಡ್ ಟ್ರೀಟ್‍ಮೆಂಟ್ ) ಸೂತ್ರವನ್ನು ಅಳವಡಿಸಿಕೊಂಡಿದೆ. ಇದರನ್ವಯ ರೋಗ ಪತ್ತೆ, ವೈರಾಣು ಪರೀಕ್ಷೆ ಹಾಗೂ ಸೋಂಕು ದೃಢಪಟ್ಟಲ್ಲಿ ಚಿಕಿತ್ಸೆ ನೀಡಲಾಗುವುದು. ಹತ್ತು ವರ್ಷ ವಯೋಮಾನದ ಮಕ್ಕಳು ಹಾಗೂ 60 ವರ್ಷ ವಯೋಮಾನ ಮೀರಿದ ವೃದ್ಧರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲು ಮನವಿ:ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಕೋವಿಡ್-19 ರ ತಡೆಗೆ ಸಜ್ಜುಗೊಂಡಿವೆ. ಸರ್ಕಾರಿ ಹಾಗೂ ಖಾಸಗಿ ಒಳಗೊಂಡಂತೆ ರಾಜ್ಯದ 47 ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿಗಳಲ್ಲಿ ಮೀಸಲಿರಿಸಲಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಪ್ರತ್ಯೇಕ ಸಂಪನ್ಮೂಲವನ್ನು ಮೀಸಲಿರಿಸಿದೆ. ಅಂತೆಯೇ, ಅಗತ್ಯ ಪರಿಕರ ಮತ್ತು ಉಪಕರಣಗಳನ್ನು ಖರೀದಿಸಲಾಗುತ್ತಿದೆ. ಖಾಸಗಿ ಡಿಸ್ಟಿಲರಿಗಳು ಸ್ಯಾನಿಟೈಜರ್‌ಗಳನ್ನು ತಯಾರಿಸಿ ಉಚಿತವಾಗಿ ನೀಡಲು ಮುಂದೆ ಬಂದಿರುವುದನ್ನು ಸ್ವಾಗತಿಸಿದ ಅವರು ರಾಜ್ಯ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಕೋವಿಡ್-19 ಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬೇಕೆಂದು ಸಾರ್ವಜನಿಕರೂ ಒಳಗೊಂಡಂತೆ ಉದ್ದಿಮೆದಾರಲ್ಲಿ ಅವರು ಮನವಿ ಮಾಡಿದರು.

ಇಡೀ ದೇಶದಲ್ಲಿ ಕರ್ನಾಟಕ ರಾಜ್ಯವು ಕೊರೊನಾ ತಡೆಗೆ ಮುಂಜಾಗ್ರತಾ ಕೈಗೊಂಡಿದ್ದರೂ ಕೂಡಾ ಸೋಂಕು ದೃಢಪಟ್ಟವರ ಸಂಖ್ಯೆ 55ಕ್ಕೆ ಏರಿಕೆಯಾಗಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಕೆಲವು ಪ್ರದೇಶಗಳಲ್ಲಿನ ವಸತಿ ಸಮುಚ್ಛಯಗಳಲ್ಲಿ ವಾಸವಾಗಿರುವ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇತರೆ ಸಿಬ್ಬಂದಿಯನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಇವರ ರಕ್ಷಣೆಗೆ ಸರ್ಕಾರ ಮುಂದಾಗಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ನಿಖರ ಮಾಹಿತಿಗೆ 'ಡ್ಯಾಷ್ ಬೋರ್ಡ್'
ಕೋವಿಡ್-19 ರ ನಿಖರ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ರಾಜ್ಯ ಸರ್ಕಾರವು ಡ್ಯಾಷ್ ಬೋರ್ಡ್ ರೂಪಿಸಿದೆ. ರಾಜ್ಯದ ಈ ಮಾದರಿಯನ್ನು ಕೇಂದ್ರ ಸರ್ಕಾರವೂ ಕೂಡಾ ಅನುಕರಿಸುತ್ತಿದೆ. ಒಂದೇ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚು ಕಂಡು ಬಂದಲ್ಲಿ ಆ ಪ್ರದೇಶವನ್ನು ಹೀಟ್ ಮ್ಯಾಪ್ ಎಂದು ಪರಿಗಣಿಸಿ ನಕ್ಷೆಯಲ್ಲಿ ಕೆಂಪು ವರ್ಣದಲ್ಲಿ ಚಿತ್ರೀಸಲು ಯೋಜಿಸಲಾಗಿದೆ. ಕೋವಿಡ್-19 ತಡೆಗೆ ಚಿತ್ರನಟರು, ಕ್ರೀಡಾಪಟುಗಳ ಮೂಲಕ ಸಂದೇಶ ಬಿತ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆಎಂದರು.

ಕೋವಿಡ್-19 ಸೋಂಕಿತರಲ್ಲಿ ನೈತಿಕ ಸ್ಪೂರ್ತಿ ತುಂಬಲು ರಾಜ್ಯಾದ್ಯಂತ 5000 ಕೊರೊನಾ ಸೇನಾನಿಗಳು ದಿನದ 24 ಗಂಟಗಳ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ರ ಕುರಿತಂತೆ ಸಾರ್ವನಿಕರಲ್ಲಿ ಆತಂಕ ದೂರಮಾಡಲು ನುರಿತ ತಜ್ಞ ವೈದ್ಯರ ಪಟ್ಟಿ ಸಿದ್ದಪಡಿಸಿ ಅವರ ಸೇವೆಯನ್ನು ಬಳಸಿಕೊಳ್ಳುವಂತೆ ಅವರು ಖಾಸಿಗೆ ವಾಹಿನಿಗಳಿಗೆ ಸಲಹೆ ಮಾಡಿದರಲ್ಲದೆ, ಕಾರ್ಯಪಡೆ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT