ಧಾರವಾಡ: ‘ಕೆ.ಪಿ.ಎಸ್.ಸಿ ನೇಮಕಾತಿಗಳಲ್ಲಿ ಆಯಾ ಸಮುದಾಯದವರು, ಅವರಿಗಿರುವ ಮೀಸಲಾತಿಗೇ ಸೀಮಿತವಾಗಿರಬೇಕು ಎಂಬ ಸರ್ಕಾರದ ಆದೇಶವು ಸಂವಿಧಾನದ ಸಾಮಾಜಿಕ ಮತ್ತು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಡಾ. ಎಚ್.ಸಿ.ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.
‘ಮೆರಿಟ್ ಇದ್ದವರು ಮೀಸಲಾತಿಯಲ್ಲೇ ಇರಿ. ಸಾಮಾನ್ಯ ವರ್ಗಕ್ಕೆ ಬರಬೇಡಿ ಎನ್ನುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಜತೆಗೆ ಸ್ಟೇಟ್ ಸರ್ವಿಸ್ ರಿಕ್ರೂಟ್ಮೆಂಟ್ ರೂಲ್ 1995ಕ್ಕೂ ವಿರುದ್ಧವಾಗಿದೆ. ಬೆಳಗಾವಿ ಅಧಿವೇಶನದಲ್ಲಾದರೂ ಇದನ್ನು ಸರಿಪಡಿಸಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
‘ದೇಶದಲ್ಲಿ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಒಂದು ರೀತಿಯ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಧರ್ಮ ಸಂಸತ್ ಸಂವಿಧಾನಕ್ಕೆ ಸವಾಲು ಹಾಕುತ್ತಿದೆ. ಹೀಗೇ ತೀರ್ಪು ಕೊಡಬೇಕು ಎಂದು ಸುಪ್ರೀಂಕೋರ್ಟ್ಗೆ ಹೇಳುತ್ತಿದೆ. ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಟ್ಟರೆ ರಾಜಕೀಯ ಪಕ್ಷದವರು ವಿರೋಧಿಸುವುದು ಸರಿಯಲ್ಲ. ಈ ನೆಲದ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು’ ಎಂದರು.