ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತ ವೈಭವದ ಹಳಿಗೆ ಮರಳಿದ ಬಿಜೆಪಿ

ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಆರು ಕಡೆ ಅರಳಿದ ಕಮಲ, ಒಂದೇ ಕ್ಷೇತ್ರಕ್ಕೆ ಸೀಮಿತವಾದ ಕಾಂಗ್ರೆಸ್
Last Updated 16 ಮೇ 2018, 8:40 IST
ಅಕ್ಷರ ಗಾತ್ರ

ಶಿವಮೊಗ್ಗ:  ನಿರೀಕ್ಷೆಯಂತೆಯೇ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಗತ ವೈಭವ ಮರು ಸೃಷ್ಟಿಸಿದೆ. ಆದರೆ, ರಾಜ್ಯದಲ್ಲಿ ಸರ್ಕಾರ ರಚಿಸಲು ಪಕ್ಷಕ್ಕೆ ನಿರೀಕ್ಷಿತ ಬಹುಮತ ಬಾರದೇ ಇರುವ ಕಾರಣ ಗೆಲುವಿನ ಸಂಭ್ರಮ ಮಸುಕಾಗಿದೆ.

ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಕೇವಲ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯಮಾಲೆ ಧರಿಸಿದ್ದಾರೆ. ಕಳೆದ ಬಾರಿ ಮೂರು ಸ್ಥಾನಗಳಲ್ಲಿ ಗೆಲುವು ಕಂಡು ನೆಲೆ ಭದ್ರ ಮಾಡಿಕೊಂಡಿದ್ದ ಜೆಡಿಎಸ್ ಈ ಬಾರಿ ದೂಳಿಪಟವಾಗಿದೆ.

2004ರಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಗೆಲುವು ಕಾಣುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಅಂದು 2 ಕ್ಷೇತ್ರದಲ್ಲಿ ಸೋಲು ಕಂಡಿತ್ತು. ಪ್ರಸ್ತುತ ಕ್ಷೇತ್ರದಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇದ್ದು, ಕೇವಲ ಒಂದರಲ್ಲಿ ಸೋಲು ಕಂಡಿದೆ. ಆ ಮೂಲಕ ಜಿಲ್ಲೆಯ ಮಟ್ಟಿಗೆ ಬಿಜೆಪಿ ಗೆಲುವಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಚುನಾವಣೆಗೂ ವರ್ಷದ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದ ಪರಿಣಾಮ ಪ್ರಬಲ ಲಿಂಗಾಯತ ಸಮುದಾಯದ ಮತಗಳು ಪಕ್ಷಕ್ಕೆ ಇಡಿಯಾಗಿ ದೊರಕಲು ಕಾರಣವಾಯಿತು. ಬಿಜೆಪಿಯ ಸಾಂಪ್ರದಾಯಿಕ ಮತಗಳ ಜತೆಗೆ, ಯುವ ಮತದಾರರ ಮನಸ್ಸು ಸೆಳೆಯುವಲ್ಲಿ ಮುಖಂಡರು ಯಶಸ್ಸಿಯಾಗಿದ್ದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಬಂದು ಹೋಗಿದ್ದು, ಈ ಪ್ರಭಾವಿ ನಾಯಕರು ಮರಳಿನ ಸಮಸ್ಯೆ, ತುಂಗಾ ನದಿ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿ ಹಲವು ಸ್ಥಳೀಯ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಮೂಲಕ ಜಿಲ್ಲೆಯ ಮತದಾರ ಮೇಲೆ ಪ್ರಭಾವ ಬೀರಿದ್ದರು.

ಐದು ವರ್ಷಗಳು ರಾಜ್ಯದಲ್ಲಿ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ನ ಜಿಲ್ಲೆಯ ಮುಖಂಡರಲ್ಲಿನ ಸಾಮರಸ್ಯ, ಹೊಂದಾಣಿಕೆ ಕೊರತೆ, ಸಂಘಟಿತ ಪ್ರಯತ್ನದ ಮೂಲಕ ಚುನಾವಣೆ ಎದುರಿಸದೇ ಹೋದದ್ದು, ಮೇಲ್ವರ್ಗದ ಪ್ರಬಲ ಸಮುದಾಯಗಳ ವಿಶ್ವಾಸ ಗಳಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವೈಫಲ್ಯ ಕಾಂಗ್ರೆಸ್ ಹೀನಾಯ ಸೋಲಿಗೆ ಪ್ರಮುಖ ಕಾರಣಗಳು ಎಂದು ವಿಶ್ಲೇಷಿಸಲಾಗುತ್ತಿದೆ.

ಆರೋಗ್ಯದ ಅಪಪ್ರಚಾರ ಮುಳು ವಾಯಿತೇ?: ಸಾಗರದಲ್ಲಿ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಸೋಲಿಗೆ ಪ್ರಮುಖ ಕಾರಣ ಅವರ ವಯಸ್ಸು ಮತ್ತು ಬಿಜೆಪಿಯ ಸಂಘಟಿತ ಪ್ರಯತ್ನ ಕಾರಣ. ಹಾಗೆ ನೋಡಿದರೆ ಎರಡು ಬಾರಿ ಕಾಗೋಡು ಅವರನ್ನು ಮಣಿಸಿದ್ದ ಬೇಳೂರು ಗೋಪಾಲಕೃಷ್ಣ ಅವರ ಕಾಂಗ್ರೆಸ್ ಸೇರ್ಪಡೆಯ ನಂತರ ಕಾಗೋಡು ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು.

‘ಕಾಗೋಡು ಅವರಿಗೆ ಆರೋಗ್ಯದ ಸಮಸ್ಯೆಯಾಗಿದೆ. ನಡೆದಾಡಲು ಆಗುತ್ತಿಲ್ಲ. ಒಂದು ಗಂಟೆ ಈಗ ನಿಲ್ಲಲು ಆಗದವರು, ಐದು ವರ್ಷ ನಿಲ್ಲುತ್ತಾರೆಯೇ’ ಎಂಬ ಸುದ್ದಿ ಮತದಾನಕ್ಕೆ ಮೊದಲು ಕ್ಷೇತ್ರದಲ್ಲಿ ಹರಿದಾಡಿತ್ತು. ಇದು ಅವರ ಸೋಲಿಗೆ ಕಾರಣ ಎನ್ನುವುದು ಅವರ ಆಪ್ತರು ದೂರು.

ಸಾಗರ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ಗೊಂದಲ ಬಿಜೆಪಿಯಲ್ಲಿ ಇತ್ತು. ನಾಮಪತ್ರ ಸಲ್ಲಿಕೆ ಸಮಯದಲ್ಲಿ ಹರತಾಳು ಹಾಲಪ್ಪ ಅವರ ಹೆಸರು ಅಂತಿಮಗೊಳಿಸಲಾಯಿತು. ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಅವರು ಕಣಕ್ಕೆ ಇಳಿದಿದ್ದರೂ ಪಕ್ಷದ ವ್ಯವಸ್ಥಿತ ಪ್ರಚಾರ, ಯೋಗಿ ಆದಿತ್ಯನಾಥ್ ಅವರ ಭೇಟಿ, ಸಾಂಪ್ರದಾಯಿಕ ಹಿಂದೂ ಮತಗಳು, ಗ್ರಾಮೀಣ ಭಾಗದ ಲಿಂಗಾಯತ ಮತಗಳ ಕ್ರೂಡೀಕರಣ ಹಾಲಪ್ಪ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.

ದಾಖಲೆ ಮುರಿದ ಆರಗ: ಬಹು ಕುತೂಹಲ ಮೂಡಿಸಿದ್ದ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಿಂದಿನಂತೆ ಈ ಬಾರಿಯೂ ತ್ರಿಕೋನ ಸ್ಪರ್ಧೆ ಇತ್ತು. ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಆರಗ ಜ್ಞಾನೇಂದ್ರ ಆಯ್ಕೆಯಾಗಿದ್ದಾರೆ. ಸತತ ಎರಡು ಬಾರಿ ಸೋಲು ಕಂಡಿದ್ದ ಆರಗ ಮೇಲೆ ಕ್ಷೇತ್ರದ ಜನರಿಗೆ ಅನುಕಂಪವಿತ್ತು. ಪಕ್ಷದಿಂದ ಪಕ್ಷಕ್ಕೆ ಜಿಗಿದ ಮಂಜುನಾಥ ಗೌಡ ಅವರನ್ನು ಜನರು ಕೈ ಬಿಟ್ಟಿದ್ದಾರೆ. ಕಿಮ್ಮನೆ ಸಚಿವರಾದ ನಂತರ ಕ್ಷೇತ್ರದ ಹಲವು ಮುಖಂಡರು ದೂರವಾಗಿದ್ದು, ಮುಸ್ಲಿಂ ಮತಗಳ ವಿಭಜನೆ ಅವರ ಸೋಲಿಗೆ ಪ್ರಮುಖ ಕಾರಣ.

1994ರಿಂದ 2004ರವರೆಗೆ ಸತತ ಮೂರು ಬಾರಿ ಗೆಲುವು ಕಂಡಿದ್ದ ಅವರು ಪ್ರತಿ ಬಾರಿಯೂ ಗೆಲುವಿನ ಅಂತರ ಮೂರು ಸಾವಿರ ದಾಟಿರಲಿಲ್ಲ. ಇದೇ ಮೊದಲ ಬಾರಿ 21,880 ಮತಗಳ ಭಾರಿ ಅಂತರದಿಂದ ಗೆಲುವು ಕಂಡಿದ್ದಾರೆ.

ಈಶ್ವರಪ್ಪ ಕೈ ಹಿಡಿದ ಹಿಂದುತ್ವ:  ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೆ.ಎಸ್. ಈಶ್ವರಪ್ಪ ಅವರು ದಾಖಲೆಯ ಒಂದು ಲಕ್ಷಕ್ಕೂ ಅಧಿಕ ಮತ ಪಡೆದಿದ್ದಾರೆ. ಇದು ಅವರಿಗೆ ಐದನೇ ಗೆಲುವು. 7 ಬಾರಿ ಚುನಾವಣೆ ಎದುರಿಸಿರುವ ಅವರು 2 ಬಾರಿ ಸೋಲು ಕಂಡಿದ್ದಾರೆ. ಅವರೇ ಹೇಳಿಕೊಂಡಂತೆ ಹಿಂದುತ್ವ ಈ ಬಾರಿ ಅವರ ಕೈ ಹಿಡಿದಿದೆ. ಕಾಂಗ್ರೆಸ್‌ನ ಸ್ಥಳೀಯ ಮುಖಂಡರ ಅಸಹಕಾರ, ಕೆ.ಬಿ. ಪ್ರಸನ್ನಕುಮಾರ್ ಅವರ ಅತಿಯಾದ ಆತ್ಮವಿಶ್ವಾಸ ಅವರಿಗೆ ಮುಳುವಾಗಿವೆ.

ಸೇಡು ತೀರಿಸಿಕೊಂಡ ಕುಮಾರ್: ಸೊರಬ ಕ್ಷೇತ್ರದಲ್ಲಿ 2004ರಿಂದ ಆರಂಭವಾದ ಸಹೋದರರ ನಡುವಿನ ಕದನ ಈ ಬಾರಿಯೂ ಮುಂದುವರಿದಿತ್ತು. 2008 ಮತ್ತು 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಕುಮಾರ್ ಬಂಗಾರಪ್ಪ ಈ ಬಾರಿ ಮಧು ಬಂಗಾರಪ್ಪ ಅವರನ್ನು ಮಣಿಸುವ ಮೂಲಕ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.

ಚುನಾವಣೆಗೂ ಸಾಕಷ್ಟು ಮೊದಲೇ ಬಿಜೆಪಿಗೆ ಸೇರುವ ನಿರ್ಧಾರ ಮಾಡಿದ್ದು ಅವರಿಗೆ ಲಾಭ ತಂದಿದೆ. ಎರಡು ಅವಧಿಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಹಾಲಪ್ಪ ಕ್ಷೇತ್ರ ಬಿಟ್ಟುಕೊಟ್ಟ ಕಾರಣ ಸಹೋದರನ ಜತೆ ನೇರ ಹಣಾಹಣಿಗೆ ವೇದಿಕೆ ಒದಗಿಸಿಕೊಟಿತ್ತು. ಹಾಲಪ್ಪ ಬೆಂಬಲಿಗರು, ಬಿಜೆಪಿಯ ಸಾಂಪ್ರದಾಯಿಕ ಮತಗಳು, ಕುಮಾರ್ ಬೆಂಬಲಿಗರ ಒಟ್ಟು ಮತಗಳಿಂದ ಅವರ ಗೆಲುವು ಸುಲಭವಾಗಿದೆ. ಮಧು ಬಂಗಾರಪ್ಪ ಅವರು ಜೆಡಿಎಸ್ ರಾಜ್ಯ ಘಟಕದ ಯುವ ಅಧ್ಯಕ್ಷರಾಗಿ ಕ್ಷೇತ್ರದ ಕಡೆ ಹೆಚ್ಚು ಗಮನ ಹರಿಸದೇ ರಾಜ್ಯ ಸುತ್ತಿದ್ದು ಅವರ ಸೋಲಿಗೆ ಒಂದು ಕಾರಣ ಎನ್ನಬಹುದು.

ಹೊಸ ಮುಖಕ್ಕೆ ಮಣೆ: ಶಿವಮೊಗ್ಗ ಗ್ರಾಮಾಂತರದಲ್ಲಿ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರ ಸೋಲಿಗೆ ಕಾರಣಗಳು ಇರಲಿಲ್ಲ. ಬಿಜೆಪಿಯ ಅಶೋಕ್ ನಾಯ್ಕ ಹೊಸ ಮುಖ. ಇಬ್ಬರೂ ಬಂಜಾರ ಸಮುದಾಯದವರೇ. ಆದ ಕಾರಣ ಮತಗಳ ವಿಭಜನೆಯಾಗಿದೆ. ಯಡಿಯೂರಪ್ಪ ಅವರ ಪ್ರಭಾವದಿಂದ ಅಧಿಕ ಸಂಖ್ಯೆಯಲ್ಲಿ ಇರುವ ಲಿಂಗಾಯತ ಮತಗಳು ಅಶೋಕ ನಾಯ್ಕ ಕೈ ಹಿಡಿದಿವೆ.

ಇತಿಹಾಸ ನಿರ್ಮಿಸಿದ ಯಡಿಯೂರಪ್ಪ

ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ 8ನೇ ಜಯ ದಾಖಲಿಸಿದ ಯಡಿಯೂರಪ್ಪ ಆ ಮೂಲಕ ಜಿಲ್ಲೆಯಲ್ಲಿ ಅಧಿಕ ಬಾರಿ ಗೆಲುವು ಕಂಡ ಶಾಸಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

1983ರಲ್ಲಿ ಚುನಾವಣಾ ಕಣಕ್ಕೆ ಧುಮಿಕಿದ್ದ ಅವರು 1999ರಲ್ಲಿ ಒಂದು ಬಾರಿ ಮಾತ್ರ ಸೋಲು ಕಂಡಿದ್ದರು. ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಕಾರಣ ಅವರಿಗೆ ಕ್ಷೇತ್ರದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಾಂತವೀರಪ್ಪ ಗೌಡ ಕಾಂಗ್ರೆಸ್ ತೊರೆದಿದ್ದರು. ಪರಿಣಾಮ ಸೂಕ್ತ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್‌ ಕೊನೆಯವರೆಗೂ ಹುಡುಕಾಟ ನಡೆಸಿತ್ತು. ಕೊನೆಗೆ ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಅವರನ್ನು ಕಣಕ್ಕೆ ಇಳಿಸಿತ್ತು. ಈ ಎಲ್ಲ ಅಂಶಗಳು ಯಡಿಯೂರಪ್ಪ ಅವರ ಗೆಲುವಿಗೆ ಸಹಕಾರಿಯಾಗಿವೆ.

ಎಲ್ಲ ಶಾಸಕರಿಗೂ ಸೋಲು

ಶಿಕಾರಿಪುರದ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ 2013ರಲ್ಲಿ ಗೆಲುವು ಕಂಡಿದ್ದ ಎಲ್ಲ ಶಾಸಕರೂ ಈ ಬಾರಿ ಸೋಲು ಕಂಡಿದ್ದಾರೆ. ಕಿಮ್ಮನೆ ರತ್ನಾಕರ, ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ, ಎಂ.ಜೆ. ಅಪ್ಪಾಜಿ, ಶಾರದಾ, ಕೆ.ಬಿ. ಪ್ರಸನ್ನಕುಮಾರ್ ಸೋಲು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT