ಕಾರವಾರ:ಕೇಂದ್ರ ಸರ್ಕಾರವು ‘ಜಿಲ್ಲಾ ಕೌಶಲ ಅಭಿವೃದ್ಧಿ ಏಜೆನ್ಸಿ’ (ಡಿಎಸ್ಡಿಎ) ರಚಿಸುತ್ತಿದ್ದು, ಜಿಲ್ಲಾಧಿಕಾರಿ ಅದಕ್ಕೆ ಅಧ್ಯಕ್ಷರಾಗಿರುತ್ತಾರೆ. ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆರಾಜ್ಯ ಖಾತೆ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು.
ನಗರದಲ್ಲಿ ಎರಡು ದಿನ ಹಮ್ಮಿಕೊಳ್ಳಲಾಗಿರುವ ಕೌಶಲ ತರಬೇತಿ ಮತ್ತು ಉದ್ಯೋಗ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಡಿಎಸ್ಡಿಎ ಆರಂಭಿಸಲಾಗುತ್ತದೆ. ಜಿಲ್ಲೆಯಲ್ಲಿ ಎಷ್ಟು ಯುವಕರು ತಾಂತ್ರಿಕ ಶಿಕ್ಷಣ ಪಡೆದಿದ್ದಾರೆ, ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ, ಕೌಶಲಾಭಿವೃದ್ಧಿಸಂಬಂಧ ಅಗತ್ಯ ತರಬೇತಿಗೆ ವ್ಯವಸ್ಥೆ ಮಾಡುವುದು ಮಾಹಿತಿ, ವಿಚಾರಗಳು ಇದರಲ್ಲಿ ಇರಲಿವೆ. ಮುಂದಿನ ದಿನಗಳಲ್ಲಿ ಐಟಿಐ ಕಾಲೇಜುಗಳನ್ನೂ ಇದರ ಅಡಿಯಲ್ಲಿ ಸೇರಿಸುವ ಚಿಂತನೆಯಿದೆ. ಇದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿಪ್ರಥಮವಾಗಿ ಆರಂಭಿಸುವ ಆಶಯ ಹೊಂದಿದ್ದೇನೆ’ ಎಂದುಮಾಹಿತಿ ನೀಡಿದರು.
‘ಈ ಸಂಬಂಧ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳಿಗೆ ಬಂತು. ಆದರೆ, ಅದನ್ನು ನಮ್ಮ ರಾಜ್ಯದಲ್ಲಿರುವ ಕುಂಭಕರ್ಣ ಸರ್ಕಾರವು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಲ್ಲ. ನಮ್ಮ ಇಲಾಖೆಯ ‘ಸಂಕಲ್ಪ’ ಯೋಜನೆ ಜಾರಿಯಾಗಲು ಕೂಡ ರಾಜ್ಯದ ಸಚಿವರು ಸಹಿ ಮಾಡಿರಲಿಲ್ಲ. ಸಾಕಷ್ಟು ದಿನ ಕಳೆದ ಬಳಿಕ ನಾವೇ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿಕೊಂಡೆವು’ ಎಂದರು.
‘ಈ ಕುಂಭಕರ್ಣ ಸರ್ಕಾರ ಇನ್ನು ಹೆಚ್ಚು ದಿನವಿಲ್ಲ. ಬೆಳಕನ್ನು ಹೆಚ್ಚಿಸಲು ಬಾಗಿಲು ಶೀಘ್ರವೇ ತೆರಯುತ್ತದೆ’ ಎಂದು ಅವರು ಇದೇವೇಳೆ ಹೇಳಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಡಿಎಸ್ಡಿಎ ಯೋಜನೆಯನ್ನು ಕೇಂದ್ರ ಸರ್ಕಾರವು ಜಿಲ್ಲೆಗೆ ನೀಡಿದರೆ ಉತ್ತಮವಾಗಿ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.