ರಾಮನಗರ: ಜಮಖಂಡಿ ಹಾಗೂ ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭವಿಷ್ಯ ನುಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮೈತ್ರಿ ಸರ್ಕಾರ ಪತನಗೊಂಡು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ನಂತರ ಹೊಸ ರಾಜಕೀಯ ಅಧ್ಯಾಯ ಮತ್ತು ಅಭಿವೃದ್ಧಿ ದಿನಗಳು ಆರಂಭವಾಗಲಿವೆ ಎಂದರು.
ಕಾಂಗ್ರೆಸ್ – ಜೆಡಿಎಸ್ ಒಳಜಗಳ ಆರಂಭವಾಗಲಿದ್ದು, ಅವರದೇ ಪಕ್ಷದ ನಾಯಕರು ಮೈತ್ರಿ ಸರ್ಕಾರ ಕೆಡವುತ್ತಾರೆ. ಯಾವ ಕಾರಣಕ್ಕೂ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನಗರ ಎಂದರೆ ಕುಟುಂಬಕ್ಕೆ ಸೀಮಿತವಾದ ಕ್ಷೇತ್ರ ಎಂಬಂತೆ ಬ್ರಾಂಡ್ ಮಾಡಲಾಗಿದೆ. ಆದರೆ, ಈಗ ವಾತಾವರಣ ಬದಲಾಗಿದೆ. ಕ್ಷೇತ್ರದಲ್ಲಿನ ಸಮಸ್ಯೆಗಳಿಂದ ಜನರು ರೋಸಿ ಹೋಗಿದ್ದು, ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದರು.