ಬೆಂಗಳೂರು: ’ಮೋದಿ ಇತಿಹಾಸವನ್ನೇ ಓದಿಲ್ಲ. ಆರ್ಎಸ್ಎಸ್ ರಚಿಸಿರುವ ಸುಳ್ಳು ಇತಿಹಾಸ ಓದಿಕೊಂಡು ಅದನ್ನು ಜನತೆಯ ಮೇಲೆ ಹೇರಲು ಯತ್ನಿಸುತ್ತಿದ್ದಾರೆ’ ಎಂದು ಕ್ಯಾಪ್ಟನ್ ಪ್ರವೀಣ್ ದಾವರ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮೋದಿ ಅವರಿಗೆ ಸತ್ಯ ಹೇಳುವ ಚಟವೇ ಇಲ್ಲ ಎಂದೆನಿಸುತ್ತದೆ. ಪ್ರಚಾರದ ಸಂದರ್ಭದಲ್ಲಿ ಸುಳ್ಳುಗಳ ಮೇಲೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಭಾಷಣ ಮಾಡುವ ತಮ್ಮ ಚಾಕಚಕ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದರು.
‘ನಿವೃತ್ತ ಯೋಧರ ಒತ್ತಾಯದ ಮೇರೆಗೆ ಮೋದಿ ಸರ್ಕಾರ ಒನ್ ರ್ಯಾಂಕ್ ಒನ್ ಪೆನ್ಶನ್ ನೀಡಲು ಒಪ್ಪಿಕೊಂಡಿತ್ತು. ಆದರೆ ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಾದ ಹಣ ಐದು ವರ್ಷಕ್ಕೊಮ್ಮೆ ಪರಿಷ್ಕರಿಸುವಂತೆ ಆದೇಶಿಸಲಾಗಿದೆ. ಈ ಬಗ್ಗೆ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ’ ಎಂದು ಹೇಳಿದರು.
‘ನೆಹರು ಕಾಲದಲ್ಲಿಯೇ ಯೋಧರಿಗೆ ಉನ್ನತ ಹುದ್ದೆ ನೀಡಿದ್ದು. ಈ ಬಗ್ಗೆಯೂ ಮೋದಿ ಸುಳ್ಳು ಹೇಳುತ್ತಿದ್ದಾರೆ. ಮುಂದೆ ಆಡಳಿತ ನಡೆಸಿದ ಯುಪಿಎ ಸರ್ಕಾರವೂ ನಮ್ಮ ಪರವಾಗಿ ಸಾಕಷ್ಟು ಕೆಲಸ ಮಾಡಿದೆ. ಹೀಗಾಗಿ ನಮ್ಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ–ಎಕ್ಸ್ ಸರ್ವಿಸ್ಮ್ಯಾನ್ ಡಿಪಾರ್ಟ್ಮೆಂಟ್ ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದೆ’ ಎಂದು ತಿಳಿಸಿದರು.