ಬೆಂಗಳೂರು: ನವದೆಹಲಿಯ ಮನೆಗಳಲ್ಲಿ ದೊರೆತ ₹ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿರುವ ಸಮನ್ಸ್ ರದ್ದುಗೊಳಿಸಲು ಕೋರಿದ್ದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಮನವಿಯನ್ನು ನಿನ್ನೆಯಷ್ಟೇ ತಿರಸ್ಕರಿಸಿದ್ದ ಹೈಕೋರ್ಟ್ ಶುಕ್ರವಾರ ಮತ್ತೊಂದು ಬರೆ ಎಳೆದಿದೆ.
ವಿಚಾರಣೆ ವೇಳೆ ಬಂಧನ ಮಾಡದಂತೆ ರಕ್ಷಣೆ ಕೋರಿ ಡಿ.ಕೆ.ಶಿವಕುಮಾರ್ ಶುಕ್ರವಾರ ಕಲಾಪ ಆರಂಭದಲ್ಲಿ ಸಲ್ಲಿಸಿದ್ದ ಮೆಮೊ (ಜ್ಞಾಪನಾ ಪತ್ರ) ಅನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಧ್ಯಾಹ್ನ ವಿಚಾರಣೆ ನಡೆಸಿ ವಜಾ ಮಾಡಿದೆ.
ವಿಚಾರಣೆ ವೇಳೆ ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು, 'ಅರ್ಜಿದಾರರಿಗೆ ಇ.ಡಿ.ನಿನ್ನೆ ರಾತ್ರಿ ಸಮನ್ಸ್ ನೀಡಿ, ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ. ನಿನ್ನೆ ಇದೇ ನ್ಯಾಯಪೀಠ ನೀಡಿರುವ ತೀರ್ಪು ಮೇಲ್ಮನವಿ ಸಲ್ಲಿಸಬಹುದಾದ ತೀರ್ಪು. ಹಾಗಾಗಿ ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶ ಬೇಕು. ಈಗ ಮೂರು ದಿನ ಸರ್ಕಾರಿ ರಜೆ ಇದೆ. ಆದ್ದರಿಂದ ವಿಚಾರಣೆಗೆ ಹಾಜರಾದಾಗ ಬಂಧನ ಮಾಡದಂತೆ ಮಧ್ಯಂತರ ರಕ್ಷಣೆ ನೀಡಬೇಕು'ಎಂದು ಮನವಿ ಮಾಡಿದರು.
ಇದಕ್ಕೆ ಇ.ಡಿ ಪರ ಹಾಜರಿದ್ದ ಹಿರಿಯ ವಕೀಲ ಎಂ.ಬಿ. ನರಗುಂದ ಆಕ್ಷೇಪ ವ್ಯಕ್ತಪಡಿಸಿ, 'ಈ ಹಿಂದೆ ಕೇಸ್ ವಿಚಾರಣೆ ವೇಳೆ ರಕ್ಷಣೆ ನೀಡಲಾಗಿತ್ತು. ಆಗ ನೀಡಲಾಗಿದ್ದ ಮಧ್ಯಂತರ ರಕ್ಷಣೆ ಕೇಸು ಮುಗಿಯುವವರೆಗೆ ಮಾತ್ರ ಅನ್ವಯಿಸುತ್ತದೆ. ಈಗ ರಕ್ಷಣೆ ನೀಡುವ ಅವಶ್ಯಕತೆ ಇಲ್ಲ'ಎಂದು ಪ್ರತಿಪಾದಿಸಿದರು.
ಇದಕ್ಕೆ ನ್ಯಾಯಮೂರ್ತಿಗಳು, 'ಈಗಾಗಲೇ ತೀರ್ಪಿನ ಪ್ರತಿಯನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ. ಇವತ್ತೇ ಮೇಲ್ಮನವಿ ಸಲ್ಲಿಸಬಹುದಲ್ಲಾ'ಎಂದರು.
"ಈಗಾಗಲೇ ತೀರ್ಪು ನೀಡಲಾಗಿದೆ. ಈಗ ಏನೂ ಮಾಡಲಾಗುವುದಿಲ್ಲ" ಎಂದು ಅರ್ಜಿ ವಜಾ ಮಾಡಿದರು.
ಪ್ರಕರಣವೇನು?
2017ರ ಆಗಸ್ಟ್ 2ರಂದು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಡಿ.ಕೆ.ಶಿವಕುಮಾರ್ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ ₹ 8,59,69,100 ಮೊತ್ತವನ್ನು ಜಪ್ತಿ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ, ಸುನಿಲ್ ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ–1961ರ ಕಲಂ 277 ಮತ್ತು 278 ಹಾಗೂ ಭಾರತೀಯ ದಂಡ ಸಂಹಿತೆಯ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ವಿಚಾರಣೆಗೆ "ಹಾಜರಾಗುವಂತೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್ ಅನ್ನು ರದ್ದುಗೊಳಿಸಬೇಕು" ಎಂದು ಕೋರಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರವಷ್ಟೇ (ಆ.29) ವಜಾ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.