ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗಾಗಿ ನಬಾರ್ಡ್ ಸಹಿತ ಹಲವು ಕೇಂದ್ರೀಯ ಹಣಕಾಸು ಸಂಸ್ಥೆಗಳಿಂದ ನೆರವು ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಮಂಗಳವಾರ ಇಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು.
ರಾಜ್ಯದ ಬಜೆಟ್ನಲ್ಲಿ ತೆಗೆದಿರಿಸಿದ ಹಣವಲ್ಲದೆ, ನಬಾರ್ಡ್ ನಂತಹ ಹಣಕಾಸು ಸಂಸ್ಥೆಗಳಿಂದ ₹2 ಸಾವಿರ ಕೋಟಿ ಪಡೆಯಲು ಕೋರಿಕೆ ಸಲ್ಲಿಸಲಾಗುವುದು. ಈ ಪೈಕಿ ₹1,800 ಕೋಟಿಯನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೇ ವಿನಿಯೋಗಿಸಲಾಗುವುದು ಎಂದು ತಿಳಿಸಲಾಯಿತು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗಳ, ನಬಾರ್ಡ್ನ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಸ್ತಾವ ಸಲ್ಲಿಸಿ: ‘ಶಾಲೆಗಳು ಮತ್ತು ಕಾಲೇಜುಗಳ ಮೂಲಸೌಲಭ್ಯಗಳಿಗಾಗಿ ₹2 ಸಾವಿರ ಕೋಟಿಯ ಪ್ರಸ್ತಾವ ತಯಾರಿಸಿ’ ಎಂದು ಮುಖ್ಯಮಂತ್ರಿ ಅವರು ಇಲಾಖೆಗಳ ಹಿರಿಯ ಸೂಚಿಸಿದರು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಂದ ತಿಳಿದುಬಂದಿದೆ.
‘ಇದುವರೆಗೆ ನಬಾರ್ಡ್ ಸಾಲ ದೊರಕುತ್ತಿದ್ದುದು ಲೋಕೋಪಯೋಗಿ ಇಲಾಖೆಗೆ ಮಾತ್ರ. ಶಿಕ್ಷಣ ಇಲಾಖೆಗೂ ಹಣ ನೀಡಿ ಎಂದು ಸ್ವತಃ ಲೋಕೋಪಯೋಗಿ ಸಚಿವರೇ ಸೂಚಿಸಿದರು’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧಿಕಾರಿ ತಿಳಿಸಿದರು.