ಹುಬ್ಬಳ್ಳಿ: ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ಮನೆ ಮನೆ ಪ್ರಚಾರದ ಮೂಲಕ ಮತದಾರರ ಓಲೈಕೆ ಕಸರತ್ತು ನಡೆಯುತ್ತಿದೆ.
ಮಂಗಳವಾರ (ಏ. 23) ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಬಿಸಿಲ ನಡುವೆಯೂ ಭರಾಟೆ ಮುಗಿಲು ಮುಟ್ಟಿತ್ತು. ರಾಜಕೀಯ ಮುಖಂಡರ ಟೀಕೆ, ಆರೋಪ–ಪ್ರತ್ಯಾರೋಪಗಳ ಬಿರುಸಿನ ಜೊತೆಗೆ ಅಭ್ಯರ್ಥಿಗಳ ಪರ ಬೈಕ್ ರ್ಯಾಲಿ, ಪಾದಯಾತ್ರೆ, ಸಭೆಗಳು ಚುನಾವಣಾ ಕಣವನ್ನು ರಂಗೇರಿಸಿದ್ದವು.
ತೆಲುಗು ಪ್ರಭಾವ ಇರುವ ಗಂಗಾವತಿ ಹಾಗೂ ಸಿಂಧನೂರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ‘ದೇಶಕ್ಕೆ ಮಾರಕವಾಗಿರುವ ಮೋದಿಯನ್ನು ಗುಜರಾತಿಗೆ ಓಡಿಸಿ’ ಎಂದು ಏಕವಚನದಲ್ಲಿ ಹರಿಹಾಯ್ದರು.
ಬಾಗಲಕೋಟೆ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ಮತ ಯಾಚಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ‘ಮೋದಿಯನ್ನು ಈ ಬಾರಿ ಸೋಲಿಸದೇ ಬಿಟ್ಟರೆ ಹಿಟ್ಲರ್ ಆಗುತ್ತಾನೆ’ ಎಂದು ವಾಗ್ದಾಳಿ ನಡೆಸಿದರು. ‘ಪಾಕಿಸ್ತಾನವನ್ನು ಹೊಡೆಯಲು ಮೋದಿಯೇ ಬೇಕೆಂದೇನಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೊನ್ನಾವರದಲ್ಲಿ ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ಬಿಸಿ ಮುಟ್ಟಿಸಿದ ಐಟಿ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಳ್ಳಾರಿಯಲ್ಲಿ ವಿವಿಧ ಪಕ್ಷಗಳ ಮುಖಂಡರ ಮತ್ತು ಅವರ ಸಂಬಂಧಿಗಳ ಮನೆಗಳ ಮೇಲೆ ಭಾನುವಾರ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಬಿಜೆಪಿ ಶಾಸಕರಾದ ಬಿ. ಶ್ರೀರಾಮುಲು ಆಪ್ತ ರಾಜು, ಸೋಮಶೇಖರ ರೆಡ್ಡಿ ಆಪ್ತ ನರಸಿಂಹ ರೆಡ್ಡಿ ಮನೆ ಮೇಲೆ ಹಾಗೂ ಕಾಂಗ್ರೆಸ್ ಶಾಸಕಬಿ.ನಾಗೇಂದ್ರ ಅವರ ಸಂಬಂಧಿ ಯರ್ರಿಸ್ವಾಮಿ ಮತ್ತು ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ಅವರ ಮನೆಗಳ ಮೇಲೆ ದಾಳಿ ನಡೆಸಿದರು.