ಬೆಂಗಳೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೆ ರಚಿಸಲಾದ ವಿವಿಧ ತಂಡಗಳು ಈವರೆಗೆ ₹ 50.10 ಲಕ್ಷ ನಗದು ವಶಪಡಿಸಿಕೊಂಡಿದ್ದು, 21 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿಕೊಂಡಿವೆ. ಅಲ್ಲದೆ, ಸುಮಾರು 80 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಕಳೆದ 24 ಗಂಟೆಗಳಲ್ಲಿ ಸ್ಥಿರ ಕಣ್ಗಾವಲು ತಂಡಗಳು ₹5 ಲಕ್ಷ ನಗದು ವಶಪಡಿಸಿಕೊಂಡರೆ, ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ₹5.83 ಲಕ್ಷ ನಗದು ಮತ್ತು ₹20 ಸಾವಿರ ಮೌಲ್ಯದ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿವೆ.
ಗದಗ ಜಿಲ್ಲೆಯ ನರಗುಂದ ಬಳಿ ತಪಾಸಣೆ ಠಾಣೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹76 ಲಕ್ಷ ಮೊತ್ತದ ಅಕ್ರಮ ಮದ್ಯವನ್ನು ಬುಧವಾರ ತಡರಾತ್ರಿ ವಶಪಡಿಸಿಕೊಳ್ಳಲಾಗಿದೆ.
ಜಮಖಂಡಿಯ ಬಿಜೆಪಿ ಮುಖಂಡ ಜಗದೀಶ ಗುಡಗುಂಟಿ ಅವರು ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹20 ಲಕ್ಷ ನಗದನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯ ಮಾಲೀಕ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ.