ಬೆಂಗಳೂರು: ರೋಚಕ ಕಣವಾಗಿ ಬದಲಾಗಿರುವ ಮಂಡ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಖಾಡದಲ್ಲಿರುವ ತುಮಕೂರು ಸೇರಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇದೇ 18ರಂದು ಚುನಾವಣೆ ನಡೆಯಲಿದ್ದು, ಮಂಗಳವಾರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರಬೀಳಲಿದೆ.
ಮತದಾರರ ಮನಗೆಲ್ಲಲು ಮೈತ್ರಿಕೂಟ ಮತ್ತು ಬಿಜೆಪಿ ಕೊನೆಯ ಕಸರತ್ತಿನಲ್ಲಿ ತೊಡಗಿದೆ. ಅಹಿಂದ ಅಸ್ತ್ರ ಬಳಕೆ, ಸಮುದಾಯಗಳ ಓಲೈಕೆ, ಜಾತಿ ನಿಂದನೆ, ಆರೋಪ– ಪ್ರತ್ಯಾರೋಪ ಮುಗಿಲು ಮುಟ್ಟಿದೆ. ಉಳಿದಿರುವ ಕೆಲವೇ ಗಂಟೆಗಳಲ್ಲಿ ಮತದಾರರ ಓಲೈಕೆಗೆ ಟೊಂಕಕಟ್ಟಿರುವ ಮೂರೂ ಪಕ್ಷಗಳ ನಾಯಕರು, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ.
ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಹಾಸನ, ಮೈಸೂರು–ಕೊಡಗು, ಉಡುಪಿ– ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇ ಕೆಂದು ಪಣ ತೊಟ್ಟಿರುವ ಬಿ.ಎಸ್. ಯಡಿಯೂರಪ್ಪ ವಿವಿಧೆಡೆ ಸುತ್ತಾಡಿದ್ದಾರೆ. ಬಿಜೆಪಿಗೆ ಸೋಲುಣಿಸಲೇಬೇಕೆಂದು ಎಲ್ಲ ವೈಮನಸ್ಸುಗಳನ್ನು ಬದಿಗಿಟ್ಟು ಕೈಜೋಡಿಸಿರುವ ಜೆಡಿಎಸ್– ಕಾಂಗ್ರೆಸ್ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಮತದಾರರ ಒಲವು ಗಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಚುನಾವಣಾ ಪ್ರಚಾರ ನಡೆಸಿದ್ದಾರೆ. ಆ ಮೂಲಕ, ಮತದಾರರ ಒಲವು ಗಳಿಸಲು ಎಲ್ಲ ತಂತ್ರಗಾರಿಕೆ ಬಳಸಿದ್ದಾರೆ.